ಭಾರತೀಯ ಟಿವಿ. ಚಾನಲುಗಳ ಆ್ಯಂಕರ್ಸ್/ಸುದ್ದಿವಾಚಕ/ ವಾಚಕಿಯರ ಮೇಕಪ್ ಅಗತ್ಯಕ್ಕಿಂತಲೂ ಹೆಚ್ಚು. ಅದರಲ್ಲೂ ಪ್ರಾಂತೀಯ ಭಾಷೆಗಳ ವಾಹಿನಿಗಳಲ್ಲಿ  ಇವರುಗಳ ಮೇಕಪ್ ಮತ್ತಷ್ಟೂ ಜಾಸ್ತಿ. ಕಪ್ಪಗಿರುವ ವಾಚಕಿಯರಂತೂ ಮುಂಗೈಗೂ ಮೇಕಪ್ ಮಾಡಿಸಿಕೊಂಡಿರುತ್ತಾರೆ. ಆದರೆ ಇವರ ಕುತ್ತಿಗೆ, ಕಿವಿಗಳಿಗೆ ಮೇಕಪ್ ಟಚ್ ಕೊಡುವುದನ್ನು ಮೇಕಪ್ ಮ್ಯಾನ್ ಮರೆತಿರುತ್ತಾನೆ. ಇದರಿಂದ ಸ್ಟುಡಿಯೋದ ಪ್ರಖರ ಬೆಳಕಿನಲ್ಲಿ ವಾಚಕಿಯರು ವಿಚಿತ್ರವಾಗಿ ಕಾಣುತ್ತಿರುತ್ತಾರೆ.

ಕ್ಯಾಮರಾ ಕ್ಲೋಸ್ ಅಪ್ನ್ನಲ್ಲಿ ಇನ್ನೂ ಅಸಹಜತೆ. ಇಂಥ ವಾಚಕಿಯರು ಲೋಕಾಭಿರಾಮವಾಗಿ ಮಾತನಾಡುವಾಗಅಯ್ಯೋ ತಮ್ಮ ಚರ್ಮ ಬೆಳ್ಳಗಿರಬೇಕಿತ್ತು” ಎಂದು ಕೊರಗುತ್ತಿರುತ್ತಾರೆ. ಇಂಥದ್ದೇ ಮನೋಭಾವ ವಾರ್ತಾವಾಚಕಿಯರ ಆಯ್ಕೆಸಮಿತಿ ಸದಸ್ಯರಿಗೆ ಇದ್ದಿದ್ದರೆ ಕಪ್ಪನೆಯವರು ಖಂಡಿತಾ ಆಯ್ಕೆಯಾಗುತ್ತಿರಲ್ಲಿಲ್ಲ ಎಂಬ ಸಂಗತಿಯನ್ನಿವರು ಮರೆತಿರುತ್ತಾರೆ. ನಿಜಕ್ಕೂ ವಾರ್ತಾ ವಾಚಕಿಯರು ಆಕರ್ಷಕವಾಗಿಯೇ ಇರುತ್ತಾರೆ. ಆದರೂ ಚರ್ಮದ ಬಣ್ಣದ ಕೀಳರಿಮೆ.ಕಪ್ಪಗಿದ್ದರೆ ಕೊರಗುವ ಮನೋಭಾವ ಭಾರತೀಯರಲ್ಲಿ ಎಂದಿನಿಂದ ಪ್ರಾರಂಭವಾಯಿತು ಎಂಬುದೇ ದೊಡ್ಡ ಪ್ರಶ್ನೆ. ಪ್ರವೃತ್ತಿಯಿಂದ ತಾವ್ಯಾಕೆ ಹೀಗೆ ಹುಟ್ಟಿದೆವೋ ಎಂಬಷ್ಟು ಕೀಳರಿಮೆ ಕಪ್ಪನೆ ಹೆಣ್ಣುಗಳಲ್ಲಿ ಮನೆಮಾಡಿರುತ್ತದೆ. ಇವರಿಗೆ ಹೋಲಿಸಿದರೆ ಕಪ್ಪನೆ ಗಂಡುಗಳಲ್ಲಿ ಇಂಥ ಕೀಳಿರಿಮೆ ಕಡಿಮೆ. ಇದು ಹೆಣ್ಣುಗಂಡಿನ ಕುರಿತ ಭಾರತಿಯ ಸಮಾಜದ ಪೂರ್ವಾಗ್ರಹ ಪೀಡಿತ ಭಾವನೆಗೂ ನಿದರ್ಶನ. ಸಾಮಾನ್ಯವಾಗಿ ಹೆಣ್ಣೆತ್ತವರು ಅಂತಿಮವಾಗಿ ಯೋಚಿಸುವುದು, ಆಕೆ ಮದುವೆ ಕುರಿತಂತೆ. “ಕಪ್ಪು ಚರ್ಮ ಉಳ್ಳ ಯುವತಿ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುವುದು ಕಷ್ಟ; ವರದಕ್ಷಿಣೆ ಹೆಚ್ಚು ತೆರಬೇಕು” ಎಂಬೆಲ್ಲ ಚಿಂತೆ. “ಕಪ್ಪಾಗಿರುವವರು ನೋಡಲು ಆಕರ್ಷಕವಾಗಿರುವುದಿಲ್ಲ” ಎಂಬಷ್ಟು ಮಟ್ಟಿಗೆ ಪೂರ್ವಗ್ರಹಪೀಡಿತ ಮನೋಭಾವ.

ಪ್ರಾಚೀನ ಭಾರತೀಯರು ಖಂಡಿತಾ ಇಂಥ ಬಣ್ಣ ಪೂರ್ವಾಗ್ರಹಪೀಡಿತರಾಗಿರಲ್ಲಿಲ್ಲ. ಬಹುಶಃ ಬ್ರಿಟಿಷರು ಇಲ್ಲಿ ತಮ್ಮ ಪ್ರಭಾವ ಮೂಡಿಸುವವರೆಗೂ ಇಂಥದೊಂದು ಪೂರ್ವಾಗ್ರಹ ಇದ್ದಿರಲ್ಲಿಕ್ಕಿಲ್ಲ. ಪ್ರಾಚೀನ ಭಾರತೀಯರಂತೂ ಸೌಂದರ್ಯಕ್ಕೂ, ಬಣ್ಣಕ್ಕೂ ಸಂಬಂಧವನ್ನೇ ಕಲ್ಪಿಸಿರಲಿಲ್ಲ. ಇದಕ್ಕೆ ಅತ್ಯುತ್ತಮ ನಿದರ್ಶನ ಶಿವ, ಕೃಷ್ಣ, ರಾಮ ಮತ್ತು ದ್ರೌಪದಿ.

ಪಾಂಚಾಲ ರಾಜ್ಯದ ಮಹಾರಾಜ ಯಜ್ಞಸೇನ (ದ್ರುಪದ) ಮಹಾರಾಜನ ಮಗಳಾದ ದ್ರೌಪದಿ ಜಗದೇಕ ಸುಂದರಿ. ಈಕೆಗೆ ಕೃಷ್ಣೆ, ಪಾಂಚಾಲಿ ಎಂಬ ಹೆಸರುಗಳೂ ಇವೆ. ಕಪ್ಪಗಿದ್ದ ಕಾರಣಕ್ಕೆ ಕೃಷ್ಣೆ ಎಂಬ ಹೆಸರು ಬಂದಿದೆ. ಈಕೆಯ ಅಪೂರ್ವ ಸೌಂದರ್ಯದ ವರ್ಣನೆ ಇತರ ರಾಜ್ಯ, ದೇಶಗಳಲ್ಲಿ ಹರಡಿರುತ್ತದೆ. ಅಲ್ಲಿಯ ರಾಜಮಹಾರಾಜರು ಈಕೆಯನ್ನು ವರಿಸಲು ತುದಿಗಾಲಿನಲ್ಲಿ ನಿಂತಿರುತ್ತಾರೆ.

ದ್ರುಪದ ಮಹಾರಾಜನಿಗೆ ಕೃಷ್ಣೆಯನ್ನು ಅರ್ಜುನನಿಗೆ ಕೊಟ್ಟು ಮದುವೆ ಮಾಡಬೇಕೆನ್ನುವ ಅಪೇಕ್ಷೆ. ಪಾಂಡವರು ಅರಗಿನ ಅರಮನೆಯಿಂದ ಪಾರಾಗಿ, ಕೌರವರ ಕಡೆಯ ಹಂತಕ ಪಡೆಗೆ ಸಿಲುಕಬಾರದೆನ್ನುವ ಕಾರಣಕ್ಕೆ ವೇಷಧಾರಿಗಳಾಗಿರುತ್ತಾರೆ. ಇವರೆಲ್ಲರು ಪಾಂಚಾಲ (ಕನೌಜ್ ಪ್ರಾಂತ್ಯ) ರಾಜ್ಯದ ರಾಜಧಾನಿ ಸಮೀಪ ಬ್ರಾಹ್ಣಣ ವೇಷಧಾರಿಗಳಾಗಿ ಇರುತ್ತಾರೆ.

ಇದೇ ಸಂದರ್ಭದಲ್ಲಿ ದ್ರುಪದ ಮಹಾರಾಜ, ದ್ರೌಪದಿ ಸ್ವಯಂವರ ಏರ್ಪಡಿಸಿರುತ್ತಾನೆ. ಮುಖ್ಯರಾದ ರಾಜಮಹಾರಾಜರಿಗೆ ಆಮಂತ್ರಣ ಹೋಗಿ ಅವರೆಲ್ಲರೂ ಆಗಮಿಸಿರುತ್ತಾರೆ. ಎಲ್ಲರೂ ದ್ರೌಪದಿ ನಿರೀಕ್ಷೆಯಲ್ಲಿರುತ್ತಾರೆ. ಬ್ರಾಹ್ಣಣರ ಮಧ್ಯದಲ್ಲಿ ಪಾಂಡವರು ಕುಳಿತಿರುತ್ತಾರೆ. ಆಗ ಯುವರಾಜ ದೃಷ್ಟದ್ಯುಮ್ನ ತನ್ನ ಸಹೋದರಿ ಕರೆದುಕೊಂಡು ಸಭಾಮಂಟಪಕ್ಕೆ ಬರುತ್ತಾನೆ. ದ್ರೌಪದಿಯ ಅನುಪಮ ಸೌಂದರ್ಯ ನೋಡಿದವರೆಲ್ಲರೂಪಡೆದರೆ ಇಂಥ ಸುಂದರಿಯನ್ನೇ ಪತ್ನಿಯಾಗಿ ಪಡೆಯಬೇಕು” ಎಂದುಕೊಳ್ಳುತ್ತಾರೆ. ಮೊದಲು ದೃಷ್ಟದ್ಯುಮ್ನ, ತನ್ನ ಸಹೋದರಿಗೆ ಅಲ್ಲಿ ನೆರೆದಿದ್ದ ವಧು ಆಕಾಂಕ್ಷಿ ಪ್ರಮುಖರ ಪರಿಚಯ ಮಾಡಿಕೊಡುತ್ತಾನೆ.

ಕೃಷ್ಣೆ, ಈತ ದುರ್ಯೋಧನ, ಯುಯುತ್ಸು, ಶಲ್ಯ, ವಿರಾಟ, ಬಲರಾಮ” ಹೀಗೆ ಇತರರ ಹೆಸರುಗಳನ್ನೂ ಹೇಳಿ ಪರಿಚಯಿಸುತ್ತಾನೆ. ನಂತರ ಸಭೆಯನ್ನುದ್ದೇಶಿಸಿ, “ ಬಿಲ್ಲಿನ ಹೆದೆಯೇರಿಸಿ, ಎತ್ತರದ ಸ್ತಂಭದ ಮೇಲೆ ಚಲಿಸುತ್ತಿರುವ ಚಕ್ರದ ಹಿಂಭಾಗದಲ್ಲಿರುವ ಲಕ್ಷ್ಯ ಭೇದಿಸಬೇಕುಎನ್ನುತ್ತಾನೆ. ಅಲ್ಲಿರುವ ಭಾರಿ ಬಿಲ್ಲು ನೋಡುತ್ತಿದಂತೆಯೇ ಹಲವರ ಉತ್ಸಾಹ ಠುಸ್ಸೆನ್ನುತ್ತದೆ. ಕೆಲವರು ಹುರುಪಿನಿಂದ ಮುಂದೆ ಬಂದು, ಬಿಲ್ಲಿನ ಹೇದೆಯೇರಿಸುವುದಿರಲಿ, ಬಿಲ್ಲು ಎತ್ತಲೂ ವಿಫಲರಾಗುತ್ತಾರೆ. ಇವರಲ್ಲಿ ಒಂದಿಬ್ಬರು ಕೆಳಗೆ ಬಿದ್ದು ನಗೆಪಾಟಲಿಗೀಡಾಗುತ್ತಾರೆ. ಸಂದರ್ಭದಲ್ಲಿ ಬ್ರಾಹ್ಮಣ ಪ್ರೇಕ್ಷಕರ ಗುಂಪಿನ ಮಧ್ಯದಿಂದ ಅರ್ಜುನ ಎದ್ದುನಿಲ್ಲುತ್ತಾನೆ. ಈತ ಭಾರಿ ಗಾತ್ರದ ಬಿಲ್ಲು ಇಟ್ಟ ವೇದಿಕೆಗೆ ಹೋಗುತ್ತಿದಂತೆ ಕೋಲಾಹಲ.

ಕ್ಷತ್ರೀಯರ ಕೈಲಾಗದ್ದನ್ನು ಬ್ರಾಹ್ಮಣ ಮಾಡಿಯನೇಎಂಬ ಇವರೆಲ್ಲರ ಅನಿಸಿಕೆ ಸುಳ್ಳುಮಾಡುವ ಅರ್ಜುನ ನಿರಾಯಾಸವಾಗಿ ಪಂಥ ಗೆಲ್ಲುತ್ತಾನೆ. ದ್ರೌಪದಿ ಹಸನ್ಮುಖಿಯಾಗಿ ಮಾಲೆ ಹಾಕುತ್ತಾಳೆ. ಕ್ಷತ್ರೀಯರ ಗುಂಪಿನಲ್ಲಿ ಗೌಜುಗದ್ದಲ ಪ್ರಾರಂಭ. ಇಂಥಸ್ತ್ರಿರತ್ನ ಪಡೆಯಲು ಏರ್ಪಡಿಸಿರುವ ಸ್ವಯಂವರದಲ್ಲಿ ಬ್ರಾಹ್ಮಣ ಬಂದಿದ್ದೇ ತಪ್ಪು” ಎಂದು ಕೂಗಾಡಿ ಗಲಾಟೆ ಆರಂಭಿಸುತ್ತಾರೆ. ಇದನ್ನು ಕೃಷ್ಣ ಶಮನ ಮಾಡುತ್ತಾನೆ

ಇಲ್ಲಿ ನಾವು ಗಮನಿಸಬೇಕಾದ ಅಂಶವೇನೆಂದರೆ ಓರ್ವ ಕಪ್ಪು ಹೆಣ್ಣಿಗೆ ಕಠಿಣ ಪರೀಕ್ಷೆಯ ಸ್ವಯಂವರ ಏರ್ಪಡಿಸಿರುವುದು, ಇವಳನ್ನು ಪಡೆಯಲು ದೊಡ್ಡ ದೊಡ್ಡ ರಾಜಮಹಾರಾಜರು ಕಾತರಿಸುತ್ತಿರುವುದು. ಕಾಲಘಟ್ಟದಲ್ಲಿ ಕಪ್ಪು ಚರ್ಮದ ಹೆಣ್ಣು ಕುರಿತು ತಾತ್ಸಾರ ಭಾವನೆ ಇದ್ದಿದ್ದರೆ ಇಂಥ ಸನ್ನಿವೇಶ ನಿರ್ಮಾಣವಾಗುತ್ತಿರಲಿಲ್ಲ.

ಧೃಷ್ಟದ್ಯುಮ್ನ ತನ್ನ ಸಹೋದರಿಯನ್ನು ಕರೆಯುವುದುಕೃಷ್ಣೆಎಂದೇ. ಅಂದರೆ ಕಪ್ಪನೆಯವಳೆ ಎಂದರ್ಥ. ಹೀಗೆ ಕರೆಸಿಕೊಳ್ಳುವುದು ಅವಮಾನಕರವೆಂಬ ಭಾವ ಇರಲ್ಲಿಲ್ಲವೆಂದರ್ಥ. ದ್ರೌಪದಿ ಮೋಹನಾಂಗಿ, ಜಗದೇಕ ಸುಂದರಿ, ಮಹಾಭಾರತದ ನಿಜನಾಯಕಿ ಮೋಹನಾಂಗಿ.

ಮಹಾಭಾರತದ ಇನ್ನೋರ್ವ ಮನಮೋಹಕ ಮೋಹನಾಂಗನೆಂದರೆ ಕೃಷ್ಣ. ಈತನ ಮೈಬಣ್ಣ ಕಪ್ಪು. ಆದ್ದರಿಂದಲೇಕೃಷ್ಣ’ ಅರ್ಥಾತ್ ಕರಿಯ ಎಂಬ ಅನ್ವರ್ಥಕನಾಮ. ಶ್ಯಾಮ ಎಂತಲೂ ಕರೆಯುತ್ತಾರೆ. ಹೀಗೆಂದರೂ ಕಪ್ಪು ಎಂದರ್ಥ. ಇಂಥ ಮೋಹನಮುರುಳಿಯನ್ನು ಪಡೆಯಲು ಹಲವಾರು ಯುವತಿಯರು ಪ್ರಯತ್ನಿಸುತ್ತಾರೆ.

ಒಂದು ವೇಳೆ ಕಪ್ಪನೇ ಮೈಬಣ್ಣದವರ ಕುರಿತು ತಾತ್ಸರವಿದ್ದರೆ ಇಂಥ ಮೋಹಕ ಪ್ರಸಂಗಗಳು ಜರುಗುತ್ತಲೇ ಇರಲ್ಲಿಲ್ಲ. ದ್ವಾಪರಯುಗವನ್ನು ಆವರಿಸಿಕೊಂಡ ಚೇತನವೆಂದರೆ ಕೃಷ್ಣ. ದ್ವಾಪರಯುಗಕ್ಕಿಂತಲೂ ಮೊದಲಿನ ತ್ರೇತ್ರಾಯುಗದ ನಾಯಕ ರಾಮ.

ಈತನ ಮೈಬಣ್ಣವೂ ಕಪ್ಪು. ರಾಮ ಎಂದರೆ ಕಪ್ಪು ಎಂಬರ್ಥವೂ ಇದೆ. ರಾಮ ಅದ್ವೀತಿಯ ಚೆಲುವ. ವಿಶ್ವಾಮಿತ್ರನಿಗೆ ಸಹಾಯ ಮಾಡಿ ಮಿಥಿಲಾ ನಗರ ಪ್ರವೇಶ ಮಾಡಿದಾಗ ಅಲ್ಲಿನ ಜನರು ಈತನ ಅನುಪಮ ಸೌಂದರ್ಯ ನೋಡಿ ನಿಬ್ಬೆರಗಾಗುತ್ತಾರೆ. ವರ್ತಮಾನ ಸೀತೆಗೂ ತಲುಪಿ ಆಕೆಯೂ ಚೆಲುವನನ್ನು ಕಾಣಲು ಕಾತರಳಾಗುತ್ತಾಳೆ. ರಾಮನನ್ನು ಮೊದಲ ಬಾರಿಗೆ ಸಂದರ್ಶಿಸಿದಾಗ ತನ್ನ ಸಖಿಯರು ವರ್ಣಿಸಿದಕ್ಕಿಂತಲೂ ರಾಮ ಸುಂದರನಾಗಿದ್ದಾನೆ ಎಂದುಕೊಳ್ಳುತ್ತಾಳೆ. ಈಕೆ ಶ್ವೇತ ವರ್ಣೆ. ರಾಮ ಕಪ್ಪು. ಕರಿಯ ಎಂಬ ತೆಗಳಿಕೆ ಭಾವ ಆಗ ಚಾಲ್ತಿಯಲ್ಲಿದ್ದರೆ ಸೀತೆಗಿಂತ ಭಾವನೆ ಬರುತ್ತಿರಲ್ಲಿಲ್ಲವೇನೋ.

ತೇತ್ರಾ ಯುಗದ ಶ್ವೇತವರ್ಣೆ ನಾಯಕಿಯನ್ನು ಮದುವೆಯಾದವನು ಕಪ್ಪನೆಯ ರಾಮ. ದ್ವಾಪರಯುಗದ ಕಪ್ಪುವರ್ಣೆ ನಾಯಕಿಯನ್ನು ಮದುವೆಯಾದವನು ಶ್ವೇತವರ್ಣದ ಅರ್ಜುನ. ಇವೆಲ್ಲ ಬಣ್ಣಗಳ ಬಗ್ಗೆ ಭಾರತೀಯರು ಎಂದೂ ಮೇಲು, ಕೀಳು, ಸುಂದರ – ಕುರೂಪ ಎಂಬ ಭಾವನೆಗಳನ್ನು ಹೊಂದಿರಲಿಲ್ಲ ಎಂಬುದನ್ನು ತೋರ್ಪಡಿಸುತ್ತದೆ.

ಕರಾವಳಿ ತೀರದ ಕೇರಳ, ತಮಿಳುನಾಡುಗಳ ನಸುಗಪ್ಪು, ಕಪ್ಪು ಹೆಣ್ಣುಗಳ ದೇಹ ಸೌಂದರ್ಯ ಅಪೂರ್ವ. ಇದೇ ರೀತಿ ದಕ್ಷಿಣ ಭಾರತದ ಕಾಡುಗಳಲ್ಲಿರುವ ಬುಡಕಟ್ಟು ಜನಾಂಗಗಳ ಕಪ್ಪನೆಯ ಹೆಣ್ಣುಗಳ ಸುಂದರತೆ ಕೂಡ. ಆದರೆ ಬ್ರಿಟಿಷರು ಬಂದ ನಂತರ ಇಂಥ ಅಪರೂಪದ ಸೌಂದರ್ಯ, ಕಪ್ಪು ಎಂಬ ತಾತ್ಸಾರ ಮನೋಭಾವಕ್ಕೆ ಒಳಗಾಗಿರುವುದು ವಿಷಾದನೀಯ.

ಕಪ್ಪಾಗಿರುವವರ ಬಗ್ಗೆ ನಿಸರ್ಗಕ್ಕೆ ತುಸು ಹೆಚ್ಚೇ ವಾತ್ಸಲ್ಯ ಇರುವಂತೆ ಕಾಣುತ್ತದೆ. ಏಕೆಂದರೆ ಕಪ್ಪನೆ ಮೈಬಣ್ಣದವರಿಗೆಸನ್ ಬರ್ನ್ಸಾಧ್ಯತೆ ಭಾರಿ ಕಡಿಮೆ. ಅದೇ ರೀತಿ ಚರ್ಮದ ಕಾಯಿಲೆಗಳು ತಗುಲುವ ಸಾಧ್ಯತೆ ಕೂಡ ಕಡಿಮೆ. ಹವಾಮಾನದ ವ್ಯೆಪರಿತ್ಯಗಳನ್ನು ಕಪ್ಪು ಚರ್ಮ ಸುಲಭವಾಗಿ ತಡೆದುಕೊಳ್ಳಬಲ್ಲುದು.ಇಷ್ಟೇಲ್ಲ ಹಿನ್ನೆಲೆಯಿರುವ ಕಪ್ಪುವರ್ಣದ ಬಗ್ಗೆ ಭಾರತೀಯರು ತಾತ್ಸಾರ ಮನೋಭಾವನೆ ತಳೆದಿರುವುದು ಆಶ್ಚರ್ಯ ಮೂಡಿಸುತ್ತದೆ.

Similar Posts

Leave a Reply

Your email address will not be published. Required fields are marked *