ಸಿನಿಮಾ

ಸರ್ವಾಧಿಕಾರಿ ಸತ್ತ ನಂತರವೇ ಅವನ ವಿರುದ್ಧ ಸಿನಿಮಾ

ಬೆಂಗಳೂರು, 31 ಜನವರಿ:ʼಇಂದಿನ ದಿನಗಳಲ್ಲಿ ‘ಗ್ಯಾಂಗ್ಸ್ ಆಫ್ ವಾಸೇಪುರ್’ ಅಥವಾ ‘ಬ್ಲ್ಯಾಕ್ ಫ್ರೈಡೇ’ ನಂತಹ ಚಿತ್ರಗಳನ್ನು ಮಾಡುವುದು ಅಸಾಧ್ಯ. ಕೆಲವು ವಿಷಯಗಳು ರಾಜಕೀಯವಾಗಿ ಸೂಕ್ಷ್ಮವಾಗಿ ಪರಿಣಮಿಸಿದ್ದು, ವಿವಾದಗಳಿಗೆ ಕಾರಣವಾಗುತ್ತದೆ’ ಎಂದು ಅನುರಾಗ್‌ ಕಶ್ಯಪ್‌ ಅಭಿಪ್ರಾಯಪಟ್ಟಿದ್ದಾರೆ.

17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಇಂದು ಆಯೋಜಿತವಾಗಿದ್ದ  ‘ಫಿಯರ್‌ಲೆಸ್ ಫಿಲ್ಮ್ ಮೇಕಿಂಗ್ʼ (ಭಯವಿಲ್ಲದ ಚಲನಚಿತ್ರ ನಿರ್ಮಾಣ) ಸಂವಾದದಲ್ಲಿ ಬಾಲಿವುಡ್‌ ನಟ-ನಿರ್ದೇಶಕ ಅನುರಾಗ್‌ ಕಶ್ಯಪ್‌ ಮಾತನಾಡಿದರು. ಸದ್ಯದ ಸಿನಿಮಾ ಪ್ರವೃತ್ತಿ, ರಾಜಕೀಯ ಮತ್ತು ತಂತ್ರಜ್ಞಾನದ ಬಗ್ಗೆ ಮುಕ್ತವಾಗಿ ಮಾತನಾಡಿದರು. ಖ್ಯಾತ ಚಿತ್ರ ವಿಮರ್ಶಕ ಭಾರದ್ವಾಜ್ ರಂಗನ್ ಈ ಸಂವಾದವನ್ನು ನಡೆಸಿಕೊಟ್ಟರು.

ಇರಾನ್ ಅಥವಾ ರಷ್ಯಾದಂತಹ ರಾಷ್ಟ್ರಗಳ ನಿರ್ದೇಶಕರು ನಮಗಿಂತ ಹೆಚ್ಚಿನ ನಿರ್ಬಂಧಗಳ ನಡುವೆಯೂ ಸಿನಿಮಾ ಮಾಡುತ್ತಿದ್ದಾರೆ. ಭಾರತೀಯ ನಿರ್ದೇಶಕರು ಅವರಿಂದ ಸ್ಫೂರ್ತಿ ಪಡೆಯಬೇಕು ಎಂದರು. ರಾಜಕೀಯ ಚಿತ್ರಗಳ ಬಗ್ಗೆ ಪ್ರತಿಕ್ರಿಯಿಸುತ್ತಾ, ʼಹಿಟ್ಲರ್ ಸತ್ತ ನಂತರವಷ್ಟೇ ಜರ್ಮನಿಯಲ್ಲಿ ಅವನ ವಿರುದ್ಧ ಸಿನಿಮಾಗಳು ಬಂದವು. ಪ್ರತಿಯೊಂದಕ್ಕೂ ಸಮಯ ಬರಬೇಕುʼ ಎಂದು ಮಾರ್ಮಿಕವಾಗಿ ನುಡಿದರು. ಎಂದು ಹೇಳಿದರು.

ಇತ್ತೀಚಿನ ‘ಧುರಂಧರ್’ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಅನುರಾಗ್ ಕಶ್ಯಪ್, ʼಇದು ಧೈರ್ಯಶಾಲಿ ಮುಖ್ಯವಾಹಿನಿ ಚಿತ್ರಕ್ಕೆ ಉತ್ತಮ ಉದಾಹರಣೆ. ನನಗೆ ಈ ಸಿನಿಮಾ ಇಷ್ಟವಾಯಿತು, ಆದರೆ, ಕೆಲವು ಸಿದ್ಧಾಂತಗಳು ಇಷ್ಟವಾಗಲಿಲ್ಲ. “ಇದು ಹೊಸ ಭಾರತ” ಎಂಬ ಸಂಭಾಷಣೆ ಮತ್ತು ಒಂದು ಸುದೀರ್ಘ ರಾಜಕೀಯ ಏಕಪಾತ್ರಾಭಿನಯ ಸೇರಿದಂತೆ ಒಟ್ಟು ಮೂರು ದೃಶ್ಯಗಳು ಚಿತ್ರಕ್ಕೆ ಅನಗತ್ಯವಾಗಿದ್ದವು; ಇವುಗಳಿಲ್ಲದಿದ್ದರೂ ಚಿತ್ರದ ಪ್ರಭಾವ ಕುಗ್ಗುತ್ತಿರಲಿಲ್ಲʼ ಎಂದು ಅವರು ಅಭಿಪ್ರಾಯಪಟ್ಟರು.

ಸಿನಿಮಾಗಳನ್ನು ‘ಪ್ರಚಾರ’ ಅಥವಾ ‘ಪ್ರೊಪಗಾಂಡಾ’ ಎಂದು ಕರೆಯುವುದೇ ಒಂದು ರೀತಿಯ ಪ್ರಚಾರ ಎಂದ ಕಶ್ಯಪ್, ʼಹಾಲಿವುಡ್‌ನ ಮಾರ್ವೆಲ್ ಚಿತ್ರಗಳು ಅಮೆರಿಕದ ಶ್ರೇಷ್ಠತೆಯನ್ನು ಸಾರುತ್ತವೆ, ಆದರೆ ಯಾರೂ ಅದನ್ನು ಆ ದೃಷ್ಟಿಕೋನದಲ್ಲಿ ಟೀಕಿಸುವುದಿಲ್ಲʼ ಎಂದರು.

ಕನ್ನಡದ ‘ಟಾಕ್ಸಿಕ್’ ಚಿತ್ರದ ಟೀಸರ್ ಬಗ್ಗೆ ಮಾತನಾಡಿದ ಅವರು, ಅದನ್ನು ಅತ್ಯಂತ ಧೈರ್ಯಶಾಲಿ ಪ್ರಯತ್ನ ಎಂದು ಶ್ಲಾಘಿಸಿದರು. ʼಟೀಸರ್ ವಿರುದ್ಧ ವ್ಯಕ್ತವಾದ ಆಕ್ರೋಶವು ನಮ್ಮ ಸಾಂಸ್ಕೃತಿಕ ಬೂಟಾಟಿಕೆಯನ್ನು ತೋರಿಸುತ್ತದೆ. ತೆರೆಯ ಮೇಲೆ ಪುರುಷ ನಟರು ಶರ್ಟ್ ಇಲ್ಲದೆ ಕಾಣಿಸಿಕೊಂಡರೆ ಅಥವಾ ಅತಿಯಾದ ಪೌರುಷ ತೋರಿಸಿದರೆ ಯಾರೂ ಪ್ರಶ್ನಿಸುವುದಿಲ್ಲ. ಆದರೆ ಒಬ್ಬ ಮಹಿಳೆ ತನ್ನ ಲೈಂಗಿಕತೆಯನ್ನು ಆಚರಿಸಿದರೆ ಅದನ್ನು ಒಪ್ಪಲು ಕಷ್ಟವಾಗುತ್ತದೆʼ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯದ ಬಗ್ಗೆ ತಮಗಿರುವ ಪ್ರೀತಿಯನ್ನು ವ್ಯಕ್ತಪಡಿಸಿದ ಅನುರಾಗ್ ಕಶ್ಯಪ್, ಖ್ಯಾತ ಬರಹಗಾರ ವಿವೇಕ್ ಶಾನಭಾಗ್ ಅವರ ‘ಘಾಚರ್ ಘೋಚರ್’ ಕಾದಂಬರಿಯನ್ನು ಆಧರಿಸಿ ಕನ್ನಡ ಚಿತ್ರವೊಂದನ್ನು ನಿರ್ಮಿಸುತ್ತಿರುವುದಾಗಿ ಬಹಿರಂಗಪಡಿಸಿದರು. ಈ ಚಿತ್ರವು ಸದ್ಯ ಬರವಣಿಗೆ ಹಂತದಲ್ಲಿದ್ದು, ಮುಂದೆ ಹಿಂದಿಯಲ್ಲೂ ಬರಲಿದೆ. ಇದರ ನಿರ್ದೇಶಕರು ಮತ್ತು ಕಲಾವಿದರ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ತಿಳಿಸಿದರು.

ಇಂದಿನ ಪ್ರೇಕ್ಷಕರು ಮೊಬೈಲ್ ಫೋನ್‌ಗಳಲ್ಲಿ ಸಿನಿಮಾ ನೋಡಲು ಇಷ್ಟಪಡುತ್ತಿದ್ದಾರೆ ಮತ್ತು ನಿಧಾನಗತಿಯ ಸಿನಿಮಾಗಳಿಗೆ ಗಮನ ಸೆಳೆಯುವುದು ಕಷ್ಟವಾಗುತ್ತಿದೆ ಎಂದ ಅವರು, ʼಇದು ತಂತ್ರಜ್ಞಾನದ ಬದಲಾವಣೆಯ ಫಲವೇ ಹೊರತು ಪ್ರೇಕ್ಷಕರ ತಪ್ಪಲ್ಲʼ ಎಂದು ಅವರು ವಿಶ್ಲೇಷಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!