Kannadaಪರಿಸರ

ಬಂಜರು ಭೂಮಿಯನ್ನು ಹಸಿರು ಸ್ವರ್ಗವಾಗಿಸಿದ ‘ಅರಣ್ಯ ತಾಯಿ’ ದೇವಕಿ ಅಮ್ಮ

ನಾವು ದಿನನಿತ್ಯ ನಗರೀಕರಣ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಮರ-ಗಿಡಗಳನ್ನು ಕಡಿಯುತ್ತಾ ಪರಿಸರ ನಾಶ ಮಾಡುತ್ತಿರುವ ಈ ಕಾಲದಲ್ಲಿ, ಒಬ್ಬಂಟಿಯಾಗಿ ನಿಂತು ಐದು ಎಕರೆ ಬಂಜರು ಭೂಮಿಯನ್ನು ದಟ್ಟವಾದ ಕಾಡನ್ನಾಗಿ ಪರಿವರ್ತಿಸಿದ ಮಹಾನ್ ಚೇತನವೇ ಕೇರಳದ 92 ವರ್ಷದ ದೇವಕಿ ಅಮ್ಮ. ಯಾವುದೇ ಔಪಚಾರಿಕ ಪರಿಸರ ವಿಜ್ಞಾನದ ಶಿಕ್ಷಣವಿಲ್ಲದೆ, ಕೇವಲ ಪ್ರಕೃತಿಯ ಮೇಲಿನ ಅಪ್ರತಿಮ ಪ್ರೀತಿಯಿಂದ ಇವರು ನಿರ್ಮಿಸಿದ ಕಾಡು ಇಂದು ಸಾವಿರಾರು ಜೀವಿಗಳಿಗೆ ಆಶ್ರಯ ತಾಣವಾಗಿದೆ.

ಅಪಘಾತ ತಂದ ಬದಲಾವಣೆ:

1934ರಲ್ಲಿ ಜನಿಸಿದ ದೇವಕಿ ಅಮ್ಮ ಅವರದು ಕೃಷಿ ಹಿನ್ನೆಲೆಯ ಕುಟುಂಬ. 1980ರಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತವೊಂದು ಇವರ ಜೀವನದ ದಿಕ್ಕನ್ನೇ ಬದಲಾಯಿಸಿತು. ಮೂರು ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದ ಅವರು ಚೇತರಿಸಿಕೊಂಡ ನಂತರ ಮೊದಲಿನಂತೆ ಗದ್ದೆಗಳಲ್ಲಿ ಕಠಿಣ ಕೃಷಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಈ ಶಾರೀರಿಕ ಮತ್ತು ಮಾನಸಿಕ ನೋವಿನಿಂದ ಹೊರಬರಲು ಅವರು ತಮ್ಮ ಮನೆಯ ಹಿತ್ತಲಿನಲ್ಲಿ ಸಣ್ಣದಾಗಿ ಗಿಡಗಳನ್ನು ನೆಡಲು ಪ್ರಾರಂಭಿಸಿದರು.

‘ತಪೋವನಂ’ ಎಂಬ ಹಸಿರು ಕಾಡಿನ ಉದಯ:

ದೇವಕಿ ಅಮ್ಮನವರ ಪರಿಸರ ಕಾಳಜಿಗೆ ಅವರ ಶಿಕ್ಷಕ ಪತಿಯಾಗಿದ್ದ ಗೋಪಾಲಕೃಷ್ಣ ಪಿಳ್ಳೈ ಅವರೂ ಸಾಥ್ ನೀಡಿದರು. ಅವರು ಪ್ರವಾಸ ಹೋದ ಕಡೆಯಿಂದಲೆಲ್ಲಾ ತರುತ್ತಿದ್ದ ವಿವಿಧ ಜಾತಿಯ ಬೀಜಗಳು ಮತ್ತು ಸಸಿಗಳನ್ನು ದೇವಕಿ ಅಮ್ಮ ಪ್ರೀತಿಯಿಂದ ನೆಡುತ್ತಾ ಬಂದರು. ಕಳೆದ 45 ವರ್ಷಗಳ ನಿರಂತರ ಶ್ರಮದ ಫಲವಾಗಿ, ಇಂದು ಅವರ 5 ಎಕರೆ ಖಾಸಗಿ ಭೂಮಿ *’ಕೊಲ್ಲಾಕಲ್ ತಪೋವನಂ’* ಎಂಬ ದಟ್ಟವಾದ ಅರಣ್ಯವಾಗಿ ಮಾರ್ಪಟ್ಟಿದೆ.

ಈ ಕಾಡಿನಲ್ಲಿ ಈಗ ತೇಗ, ಮಹಾಗನಿ, ಹುಣಸೆ, ಮಾವು, ಪೈನ್ ಸೇರಿದಂತೆ 3,000ಕ್ಕೂ ಹೆಚ್ಚು ಮರಗಳು ಮತ್ತು 1,500ಕ್ಕೂ ಹೆಚ್ಚು ತಳಿಯ ಅಪರೂಪದ ಗಿಡಮೂಲಿಕೆಗಳು ಹಾಗೂ ಔಷಧೀಯ ಸಸ್ಯಗಳಿವೆ. ಇಷ್ಟು ಮಾತ್ರವಲ್ಲದೆ ಇಲ್ಲಿ ಎರಡು ನೈಸರ್ಗಿಕ ಹೊಂಡಗಳಿದ್ದು, ಮಳೆನೀರು ಕೊಯ್ಲಿನ ಮೂಲಕ ಅಂತರ್ಜಲವನ್ನು ರಕ್ಷಿಸಲಾಗುತ್ತಿದೆ.

ಜೀವವೈವಿಧ್ಯದ ತಾಣ:

ದೇವಕಿ ಅಮ್ಮ ಬೆಳೆಸಿದ ಈ ಮಾನವ ನಿರ್ಮಿತ ಕಾಡು ಕೇವಲ ಮರಗಳಿಗಷ್ಟೇ ಸೀಮಿತವಾಗಿಲ್ಲ. ಇದು ನವಿಲುಗಳು, ಕೋತಿಗಳು, ವಿವಿಧ ಜಾತಿಯ ಚಿಟ್ಟೆಗಳು ಮತ್ತು ಅಮೂರ್ ಫಾಲ್ಕನ್, ಪ್ಯಾರಡೈಸ್ ಫ್ಲೈಕ್ಯಾಚರ್ ನಂತಹ ಅಪರೂಪದ ವಲಸೆ ಹಕ್ಕಿಗಳಿಗೆ ಸುರಕ್ಷಿತ ಆಶ್ರಯ ತಾಣವಾಗಿದೆ. ಹಕ್ಕಿಗಳಿಗೆ ತೊಂದರೆಯಾಗಬಾರದೆಂದು ಇಡೀ ಕಾಡಿಗೆ ಯಾವುದೇ ನೆಟ್ ಅಳವಡಿಸದೆ, ಅವುಗಳಿಗೆ ಕುಡಿಯುವ ನೀರು ಮತ್ತು ಗೂಡು ಕಟ್ಟಲು ನೈಸರ್ಗಿಕ ವ್ಯವಸ್ಥೆ ಕಲ್ಪಿಸಿದ್ದಾರೆ.

ಸಂದ ಪ್ರಶಸ್ತಿ-ಗೌರವಗಳು:

ದೇವಕಿ ಅಮ್ಮನವರ ಈ ನಿಸ್ವಾರ್ಥ ಸೇವೆಗೆ ದೇಶ-ವಿದೇಶಗಳಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಇತ್ತೀಚೆಗಷ್ಟೇ ಭಾರತ ಸರ್ಕಾರ ಇವರ ಪರಿಸರ ಸಂರಕ್ಷಣಾ ಕಾರ್ಯವನ್ನು ಗುರುತಿಸಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲೊಂದಾದ “ಪದ್ಮಶ್ರೀ’ ನೀಡಿ ಗೌರವಿಸಿದೆ. ನಾರಿ ಶಕ್ತಿ ಪುರಸ್ಕಾರ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ,,ಕೇರಳ ಸರ್ಕಾರದ ಹರಿ ವ್ಯಕ್ತಿ ಪುರಸ್ಕಾರ ಸಂದಿದೆ.

ಇಂದಿನ ಪೀಳಿಗೆಗೆ ಪ್ರೇರಣೆ:

ವಯೋಸಹಜ ಕಾಯಿಲೆಗಳಿದ್ದರೂ ದೇವಕಿ ಅಮ್ಮ ಇಂದಿಗೂ ಪ್ರತಿದಿನ ಬೆಳಿಗ್ಗೆ ತಮ್ಮ ಕಾಡಿನಲ್ಲಿ ಐದು-ಹತ್ತು ನಿಮಿಷಗಳ ಕಾಲ ನಡೆದಾಡುತ್ತಾರೆ, ಮರಗಳೊಂದಿಗೆ ಮಾತನಾಡುತ್ತಾರೆ. “ಕಾಡಿನ ಶುದ್ಧ ಗಾಳಿ ಮತ್ತು ವಾತಾವರಣವೇ ನನ್ನನ್ನು ಇಷ್ಟು ವರ್ಷ ಆರೋಗ್ಯವಾಗಿಟ್ಟಿದೆ” ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ಅವರ ಈ ಹಸಿರು ಪರಂಪರೆಯನ್ನು ಇಂದು ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಕೂಡ ಮುಂದುವರಿಸುತ್ತಿದ್ದಾರೆ.

ಜಾಗತಿಕ ತಾಪಮಾನದ (Global Warming) ಈ ದಿನಗಳಲ್ಲಿ, ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು ಪೋಷಿಸಬೇಕು ಎಂಬ ಸಂದೇಶವನ್ನು 92 ವರ್ಷದ ಅಜ್ಜಿಯ ನಿಸ್ವಾರ್ಥ ಬದುಕು ನಮಗೆ ನೀಡುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!