ಹುಲಿಗಳು ಮಾನವ ನೆಲೆಗಳತ್ತ ಬಾರದಂತೆ ತಡೆಯಲು ಸಾಧ್ಯವೇ ?
ಕಾಡುಗಳಿಂದ ಹೊರಗೆ ಹುಲಿಗಳು ಮಾನವ ನೆಲೆಗಳು ಅಥವಾ ಗ್ರಾಮಗಳತ್ತ ಬರದಂತೆ ತಡೆಯುವ ಹಲವು ವೈಜ್ಞಾನಿಕ ಮತ್ತು ಪ್ರಾಯೋಗಿಕ ವಿಧಾನಗಳಿವೆ. ಭಾರತದಲ್ಲಿ ಹುಲಿ-ಮಾನವ ಸಂಘರ್ಷಗಳು (Human-Tiger Conflict) ಹೆಚ್ಚಾಗುತ್ತಿರುವುದು ಹುಲಿ ಸಂಖ್ಯೆಯ ಹೆಚ್ಚಳ, ಕಾಡುಗಳ ತುಂಡುತುಂಡುಗೊಳಿಸುವಿಕೆ, ಆಹಾರದ ಕೊರತೆ ಮತ್ತು ಮಾನವ ಹಸ್ತಕೇಪಗಳಿಂದ ನಡೆಯುತ್ತಿದೆ. ಇದರಲ್ಲಿ ಹುಲಿ ಸಂಖ್ಯೆ ಹೆಚ್ಚಳ ಎನ್ನುವುದು ವಿವಾದಾಸ್ಪದ ಅಥವಾ ಚರ್ಚಾಸ್ಪದ ಸಂಗತಿ ! ಇದನ್ನು ಮತ್ತೊಮ್ಮೆ ವಿವರವಾಗಿ ಚರ್ಚಿಸೋಣ.
“೧೯೭೩ರಲ್ಲಿ ಕರ್ನಾಟಕದ ಕಾಡುಗಳಲ್ಲಿ ವಿಶೇಷವಾಗಿ ನಾಗರಹೊಳೆಯಲ್ಲಿ ಹುಲಿ ಸಂರಕ್ಷಣೆ ಯೋಜನೆ ಆರಂಭವಾಯಿತು. ಅಂದಿನ ದಿನಗಳಲ್ಲಿ ಮಾನವ – ಹುಲಿ ಸಂಘರ್ಷ ಎನ್ನುವುದು ಬಹು ಅಪರೂಪ. ಇದಕ್ಕೆ ಕಾರಣ ಕಾಡು ದಟ್ಟವಾಗಿತ್ತು, ಹುಲಿಗಳ ಸಂಚಾರಕ್ಕೆ ಅಡ್ಡಿಯಿರಲಿಲ್ಲ. ಬರುಬರುತ್ತಾ ಕಾಡು ನಾನಾ ಕಾರಣಗಳಿಂದ ಒತ್ತುವರಿಯಾಗತೊಡಗಿತು. ಕೊಡಗು ಭಾಗದಲ್ಲಿಯಂತೂ ಕಾಫಿ ಎಸ್ಟೇಟುಗಳು ಅಭಯಾರಣ್ಯಗಳ ಸರಹದ್ದಿಗೆ ಬಂದು ನಿಂತವು. ಇವೆಲ್ಲದರ ಪರಿಣಾಮ ಕಾಡು ಕಿರಿದಾಗಿದೆ. ಕಿರಿದಾಗಿದೆ ಎನ್ನುವುದಕ್ಕಿಂತಲೂ ಅವುಗಳ ಆವಾಸಸ್ಥಾನಗಳು ತುಂಡುತುಂಡಾಗಿವೆ, ಒಂದು ಕಾಡಿನಿಂದ ಮತ್ತೊಂದು ಕಾಡಿಗೆ ಹೋಗಲು ಮಾರ್ಗವಿಲ್ಲದಂತಾಗಿದೆ. ಇವೆಲ್ಲದರ ಪರಿಣಾಮ ಮಾನವ – ಹುಲಿ ಸಂಘರ್ಷ ಹೆಚ್ಚಾಗಿದೆ” ಎಂದು ರಾಜ್ಯ ಅರಣ್ಯ ಇಲಾಖೆಯ ವಿಶ್ರಾಂತ ಹಿರಿಯ ಸಂರಕ್ಷಣಾಧಿಕಾರಿ ಎ.ಸಿ.ಲಕ್ಷ್ಮಣ್ ಅವರು ಪ್ರತಿಪಾದಿಸಿದರು
ಇದನ್ನೂ ಓದಿ:ಮತ್ತೆಮತ್ತೆ ಮನುಷ್ಯರ ಮೇಲೆ ಹುಲಿ ದಾಳಿ ನಡೆಯುತ್ತಿದೆ ಏಕೆ ?
ನೂರಕ್ಕೆ ನೂರರಷ್ಟು ಮಾನವ – ಹುಲಿ ಸಂಘರ್ಷ ತಡೆಯಲು ಸಾಧ್ಯವಿಲ್ಲ ನಿಜ. ಆದರೆ ಸಂಘರ್ಷವನ್ನು ಗಣನೀಯವಾಗಿ ತಡೆಯಲು ಸಾಧ್ಯವಿದೆ. ಈ ದೃಷ್ಟಿಯಲ್ಲಿ ರಾಷ್ಟ್ರೀಯ ಮಾನವ-ವನ್ಯಜೀವಿ ಸಂಘರ್ಷ ಮಿತಿಗೊಳಿಸುವ ನೀತಿ (National Human-Wildlife Conflict Mitigation Strategy) ಪ್ರಾಮುಖ್ಯತೆ ಪಡೆಯುತ್ತದೆ.
ಈ ವಿಧಾನಗಳನ್ನು ಮೂಲತಃ ಮೂರು ವರ್ಗಗಳಾಗಿ ವಿಂಗಡಿಸಬಹುದು: ಕಾಡು ನಿರ್ವಹಣೆ, ಸಾಮುದಾಯಿಕ ಮತ್ತು ವೈಯಕ್ತಿಕ ಸುರಕ್ಷತೆ, ಮತ್ತು ಸಮಸ್ಯೆಯ ಹುಲಿಗಳ ನಿರ್ವಹಣೆ. ಕಾಡು ಮತ್ತು ಆವಾಸ ನಿರ್ವಹಣೆಯ ಉಪಾಯಗಳು (Habitat Management)
ಕಾಡುಗಳನ್ನು ಸಂರಕ್ಷಣೆ ಮಾಡಬೇಕು ಮತ್ತು ವಿಸ್ತರಣೆ ಮಾಡಬೇಕು. ಹುಲಿಗಳ ಸಂಚಾರದ ಮಾರ್ಗಗಳನ್ನು (Corridors) ರಕ್ಷಿಸಿ, ಕಾಡುಗಳನ್ನು ತುಂಡುತುಂಡುಗೊಳಿಸದಂತೆ ರಕ್ಷಣೆ ನೀಡಬೇಕು. ಹೊಸ ರಕ್ಷಣಾ ಪ್ರದೇಶಗಳನ್ನು ಸ್ಥಾಪಿಸಿ ಮತ್ತು ಖಾಸಗಿ ಜಮೀನುಗಳಲ್ಲಿ ಸಂರಕ್ಷಣಾ ಒಪ್ಪಂದಗಳನ್ನು (Conservation Easements) ಜಾರಿಗೊಳಿಸಬೇಕು. ಇದರಿಂದ ಹುಲಿಗಳು ಮಾನವ ಪ್ರದೇಶಗಳತ್ತ ಚಲಿಸುವ ಸಾಧ್ಯತೆ ಕಡಿಮೆಯಾಗುತ್ತದೆ
ಕೃತಕ ಹಸ್ತಕ್ಷೇಪಗಳನ್ನು ನಿಲ್ಲಿಸಬೇಕು: ಮೇಲಿನ ವಿಧಾನವನ್ನು ಕಟ್ಟುನಿಟ್ಟಾಗಿ ಅನುಸರಿಸಿದ ನಂತರ ಕಾಡುಗಳಲ್ಲಿ ಕೃತಕ ನೀರು ತಾಣಗಳ ನಿರ್ಮಾಣ, ಹುಲ್ಲು ಬೆಳೆಸುವುದನ್ನು ಮಾಡಬಾರದು. ಕೃತಕ ಸೃಷ್ಟಿಸದೇ ಸಹಜ ಕಾಡು ಮರುಕಳಿಸುವಿಕೆ ಪ್ರಕ್ರಿಯೆಗೆ ಅವಕಾಶ ನೀಡಬೇಕು. ಇದು ಆಹಾರವಾಗುವ ಜಿಂಕೆಯಂತ ಪ್ರಾಣಿಗಳ ಸಂಖ್ಯೆಯನ್ನು ನಿಯಂತ್ರಿಸಿ, ಹುಲಿ ಸಂಖ್ಯೆ ಕಡಿಮೆ ಮಾಡುತ್ತದೆ
ಇದನ್ನೂ ಓದಿ:ಜಂಗಲ್ ಸಫಾರಿ ನಿಲ್ಲಬೇಕೆಂದು ರೈತರು ಹೇಳುತ್ತಿರುವುದು ಸರಿಯೇ ?
ಆಕರ್ಷಣೆಗಳನ್ನು ನಿವಾರಿಸಬೇಕು: ಗ್ರಾಮಗಳಲ್ಲಿ ಕಸ ಮತ್ತು ಮಾಂಸಹಾರ ತ್ಯಾಜ್ಯಗಳನ್ನು ಸರಿಯಾಗಿ ನಿರ್ವಹಿಸಬೇಕು. ಇದರಿಂದ ಹುಲಿಗಳು ಆಹಾರ ಹುಡುಕಿ ಬರದಂತೆ ಮಾಡಬಹುದು. ರೈಲುಗಳು/ರಸ್ತೆಗಳಲ್ಲಿ ಅಂಡರ್ಪಾಸ್ಗಳು ಅಥವಾ ಓವರ್ಪಾಸ್ಗಳನ್ನು ನಿರ್ಮಿಸಿ ಹುಲಿಗಳ ಚಲನೆಯನ್ನು ಸುರಕ್ಷಿತಗೊಳಿಸುವುದು ಅವಶ್ಯಕ
೨. ಸಾಮುದಾಯಿಕ ಮತ್ತು ವೈಯಕ್ತಿಕ ಸುರಕ್ಷತಾ ಉಪಾಯಗಳು (Community and Personal Safety)
ಸಾಮುದಾಯಿಕ ಜಾಗೃತಿ ಮತ್ತು ತರಬೇತಿ: ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ, ಸಮಸ್ಯೆಯ ಸಂದರ್ಭದಲ್ಲಿ ತಕ್ಷಣದ ಪ್ರತಿಕ್ರಿಯಾ ತಂಡಗಳನ್ನು (Rapid Response Teams) ರೂಪಿಸುವುದು ಅಗತ್ಯ. ತುರ್ತು ಆರ್ಥಿಕ ನೆರವು (Compensation) ಮತ್ತು ವಿಮೆಯನ್ನು ಒದಗಿಸಿ, ಗ್ರಾಮಸ್ಥರಿಗೆ ಕಾಡುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಉದ್ಯೋಗಗಳನ್ನು (Alternate Livelihoods) ಸೃಷ್ಟಿಸಬೇಕು
ಇದನ್ನೂ ಓದಿ:ವನ್ಯಜೀವಿ ಕಾಡಿಗಟ್ಟುವ ವೇಳೆ ಎಸ್.ಓ.ಪಿ. ಪಾಲಿಸಿ
ವೈಯಕ್ತಿಕ ನಿಯಮಗಳು: ಕಾಡಂಚಿನ ಹೊಲಗದ್ದೆಗಳಲ್ಲಿ ಒಂಟಿಯಾಗಿ ಕೆಲಸ ಮಾಡಬಾರದು; ಕನಿಷ್ಟ ೪-೫ ಜನರು ಒಟ್ಟಿಗೆ ಇರಬೇಕು. ಗುಂಪುಗಳಲ್ಲಿ ಸಂಚರಿಸಬೇಕು. ದೊಡ್ಡ ಧ್ವನಿಯಲ್ಲಿ ಮಾತನಾಡಬೇಕು ಅಥವಾ ಮೊಬೈಲ್ ನಲ್ಲಿ ಹೆಚ್ಚು ಸೌಂಡ್ ಕೊಟ್ಟು ಮ್ಯೂಸಿಕ್ ಪ್ಲೇ ಮಾಡಬೇಕು. ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಮುಖ್ಯ ರಸ್ತೆಗಳಲ್ಲಿ ಮಾತ್ರ ಸಂಚರಿಸಬೇಕು.ಹೊಲಗದ್ದೆಗಳಲ್ಲಿ ಕುಳಿತುಕೊಳ್ಳುವಾಗ ನೆಲಕ್ಕೆ ಕೂತುಕೊಳ್ಳಬೇಡಿ. ಈ ಭಂಗಿ ಹುಲಿಗೆ ಚಿಕ್ಕ ಆಹಾರ ಪ್ರಾಣಿಯಂತೆ ಕಾಣಬಹುದು.ನಾಯಿಗಳನ್ನು ಜೊತೆಗೆ ಕರೆದೊಯ್ಯಿರಿ; ಅವುಗಳ ಬೊಗಳುವಿಕೆ ಹುಲಿಯನ್ನು ದೂರ ಸರಿಸುತ್ತದೆ. ತಲೆಯ ಹಿಂಭಾಗಕ್ಕೆ ಮುಖದ ಮಾಸ್ಕ್ ಧರಿಸಿ. ಇದರಿಂದ ಹುಲಿಗಳು ಹಿಂದಿನಿಂದ ದಾಳಿ ಮಾಡುವುದನ್ನು ತಪ್ಪಿಸಬಹುದು. ದೂರದಲ್ಲಿ ಹುಲಿ ಕಂಡಾಗ ಪಟಾಕಿ ಸಿಡಿಸಿ. ತುರ್ತು ಸಂದರ್ಭದಲ್ಲಿ ಬಳಕೆಗಾಗಿ ಮನೆಯಿಂದ ಹೊರ ಹೋಗುವಾಗ ಪಟಾಕಿಗಳನ್ನು ತೆಗೆದುಕೊಂಡು ಹೋಗಿ
ಇದನ್ನೂ ಓದಿ:ಯಾವ ಲೆಕ್ಕದಲ್ಲಿ ಒಂದು ಸಫಾರಿ ಕಡಿಮೆಯಾಗುತ್ತದೆ ಸಚಿವರೇ
೩. ಸಮಸ್ಯೆಯ ಹುಲಿಗಳ ನಿರ್ವಹಣೆ (Problem Tiger Management)
ಸ್ಥಳಾಂತರ ಅಥವಾ ನಿರ್ವಹಣೆ: ಮಾನವರ ಮೇಲೆ ದಾಳಿ ಮಾಡುವ ‘ಮ್ಯಾನ್-ಈಟರ್’ ಹುಲಿಗಳನ್ನು ಗುರುತಿಸಿ, ಅವುಗಳನ್ನು ಸ್ಥಳಾಂತರಿಸಬೇಕು (Translocation) ಅಥವಾ ಅಗತ್ಯವಿದ್ದರೆ ಆಯಾ ಪರಿಸರದಲ್ಲಿ ನಿರ್ವಹಿಸಬೇಕು (ಕೊಲ್ಲುವುದು ಕೊನೆಯ ಆಯ್ಕೆಯಾಗಿರಬೇಕು). ಇದಕ್ಕಾಗಿ ಕ್ಯಾಮೆರಾ ಟ್ರ್ಯಾಪ್ಗಳು, ರೇಡಿಯೋ ಕಾಲರ್ಗಳು ಮತ್ತು ತರಬೇತಿ ಹೊಂದಿದ ತಂಡಗಳನ್ನು ಬಳಸಬೇಕು
ಇದನ್ನೂ ಓದಿ:ಅರಣ್ಯ ಸಚಿವರೇ ನಿಮ್ಮ ಸಿಬ್ಬಂದಿಗೆ ತುರ್ತಾಗಿ ಅತ್ಯಗತ್ಯ App ಇರುವ ಮೊಬೈಲು ಕೊಡಿ
ಪ್ರಾರಂಭಿಕ ಎಚ್ಚರಿಕೆ ವ್ಯವಸ್ಥೆ: ಸ್ಯಾಟ್ಲೈಟ್ ಟೆಲಿಮೆಟ್ರಿ, ಸೆನ್ಸಾರ್ಗಳು ಮತ್ತು ಕ್ಯಾಮೆರಾ ಟ್ರ್ಯಾಪ್ಗಳ ಮೂಲಕ ಹುಲಿಗಳ ಚಲನ ವಲನ ಗಮನಿಸಿ, ತಕ್ಷಣ ಕಾಡಂಚಿನ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಬೇಕು
ಆಯಾ ಗ್ರಾಮಗಳಲ್ಲಿ ಯುವಕರು ಇರುವಂಥ ವಾಟ್ಸಪ್ ಗ್ರೂಪ್ ಗಳ ರಚನೆಗೆ ಅರಣ್ಯ ಇಲಾಖೆ ಮುಂದಾಗಬೇಕು. ಗಸ್ತು ತಿರುಗಲು ಸ್ಥಳೀಯ ಯುವಕರನ್ನು ನೇಮಿಸಿಕೊಳ್ಳಬೇಕು. ಅವರಿಗೆ ಸ್ಥಳೀಯ ಪರಿಸರದ ಪರಿಚಯ ಇರುವುದರಿಂದ ಈ ಕಾರ್ಯನಿರ್ವಹಣೆ ಸುಗಮವಾಗಿರುತ್ತದೆ.
ಇದನ್ನೂ ಓದಿ:ಆನೆ ಶಿಬಿರಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಲು ಆಗದಿದ್ದರೆ ಮುಚ್ಚಿ
ಡ್ರೋನ್ ಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಬೇಕು. ಇದರಿಂದ ಹುಲಿ, ಚಿರತೆ, ಆನೆಗಳ ಚಲನವಲನ ತಿಳಿಯುತ್ತದೆ. ಅವುಗಳು ಮಾನವ ವಸತಿ ಸಮೀಪ ಇದ್ದಲ್ಲಿ ತಕ್ಷಣವೇ ಗ್ರಾಮಸ್ಥರಿಗೆ ಮತ್ತು ಅರಣ್ಯ ಇಲಾಖೆಯ ಸಂಬಂಧಿಸಿದ ತಂಡಗಳಿಗೆ ಎಚ್ಚರಿಕೆ ರವಾನಿಸಬಹುದು.
