ಕಾಕ್ರೋಚ್ ಜನತಾ ಪಾರ್ಟಿಗೆ ಬಿಜೆಪಿ ಬೆದರಿದೆಯೇ ?
ವ್ಯಂಗ್ಯಭರಿತ (satirical) ಡಿಜಿಟಲ್ ಸಂಘಟನೆ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಯ ಸಾಮಾಜಿಕ ಜಾಲತಾಣಗಳು ಬ್ಲಾಕ್ ಆಗಿವೆ. ಹ್ಯಾಕಿಂಗ್ ಮತ್ತು ಖಾತೆಗಳನ್ನು ತಡೆಹಿಡಿಯುವ (takedown) ಸರಣಿ ಘಟನೆಗಳ ನಂತರ ಪ್ರಸ್ತುತ ತಮ್ಮ ಯಾವುದೇ ಸಾಮಾಜಿಕ ಮಾಧ್ಯಮ ಖಾತೆಗಳ ಮೇಲಿನ ನಿಯಂತ್ರಣ ತಮಗೆ ಸಿಗುತ್ತಿಲ್ಲ. ತಮ್ಮ ಸಂಸ್ಥೆಯ ವಿರುದ್ಧ ಯೋಜಿತ ಕ್ರಮಗಳು ಜರುಗುತ್ತಿವೆ ಎಂದು ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಆರೋಪಿಸಿದ್ದಾರೆ.
ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ತಮ್ಮ ವೇದಿಕೆಯು ಅಭಿಯಾನ ನಡೆಸುತ್ತಿತ್ತು. ಈ ಹಿನ್ನೆಲೆಯಲ್ಲಿ ಇಂಥ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದು ಅಭಿಜೀತ್ ದಿಪ್ಕೆ ಹೇಳಿಕೆ.
ಶನಿವಾರ ‘X’ (ಟ್ವಿಟರ್) ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ದಿಪ್ಕೆ, ತಮ್ಮ ಚಳುವಳಿಯ ವಿರುದ್ಧ ವ್ಯವಸ್ಥಿತವಾಗಿ ನಡೆದಿರುವ ಕ್ರಮಗಳ ಬಗ್ಗೆ ವಿವರಿಸಿದ್ದಾರೆ. “ಕಾಕ್ರೋಚ್ ಜನತಾ ಪಾರ್ಟಿ ಮೇಲೆ ಭಾರಿ ಕ್ರಮ ಜರುಗಿದೆ. ಇನ್ಸ್ಟಾಗ್ರಾಮ್ ಪೇಜ್ ಹ್ಯಾಕ್ ಆಗಿದೆ. ನನ್ನ ವೈಯಕ್ತಿಕ ಇನ್ಸ್ಟಾಗ್ರಾಮ್ ಖಾತೆಯೂ ಹ್ಯಾಕ್ ಆಗಿದೆ. ಟ್ವಿಟರ್ ಖಾತೆಯನ್ನು ತಡೆಹಿಡಿಯಲಾಗಿದೆ (withheld). ಬ್ಯಾಕ್-ಅಪ್ ಖಾತೆಯನ್ನು ಸಹ ಡಿಲೀಟ್ ಮಾಡಲಾಗಿದೆ. ಅಷ್ಟೇ ಅಲ್ಲದೆ, ಸಿಜೆಪಿ (CJP) ಅಧಿಕೃತ ವೆಬ್ಸೈಟ್ ಆದ *cockroachjantaparty.org ಅನ್ನು ಸಹ ಸ್ಥಗಿತಗೊಳಿಸಲಾಗಿದೆ. ಸದ್ಯಕ್ಕೆ ಅದು ಲಭ್ಯವಿಲ್ಲ.ನಮ್ಮ ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಗಳ ಪ್ರವೇಶ ನಮಗಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದ ಹಾಗೆ ಸದ್ಯಕ್ಕೆ ಡಿಜಿಟಲ್ ರೂಪದ ಸಿಜೆಪಿ ಸಂಸ್ಥೆಯ ‘ಕಾಕ್ರೋಚ್ ಈಸ್ ಬ್ಯಾಕ್’ (Cockroach is Back) ಎಂಬ ಬ್ಯಾಕ್-ಅಪ್ ಖಾತೆಯು 2,02,000 ಕ್ಕೂ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿತ್ತು. ಇನ್ಸ್ಟಾಗ್ರಾಮ್ನಲ್ಲಿ ಇದರ ಅಧಿಕೃತ ಖಾತೆಯು 21.9 ಮಿಲಿಯನ್ಗಿಂತಲೂ (2.19 ಕೋಟಿ) ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿತ್ತು. ಸಿಜೆಪಿಯ ಸಾಮಾಜಿಕ ಜಾಲತಾಣಗಳನ್ನು ಸ್ಥಗಿತಗೊಳಿಸಿರುವುದರ ವಿರುದ್ದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದರ ಬಗ್ಗೆ ಆಲೋಚನೆ ಮಾಡುತ್ತಿರುವುದಾಗಿ ದಿಪ್ಕೆ ಹೇಳಿದ್ದಾರೆ.
ಇಲ್ಲಿ ಮೂಡುವ ಪ್ರಶ್ನೆ ಏನೆಂದರೆ ಕಾಕ್ರೋಚ್ ಪಾರ್ಟಿ ಯಾವುದೇ ಶಾಂತಿಭಂಗ, ದೇಶದ್ರೋಹಿ ಚಟುವಟಿಕೆಗಳನ್ನು ಮಾಡದಿದ್ದರೂ ಅದರ ವಿರುದ್ಧ ಕ್ರಮಗಳನ್ನು ಏಕೆ ಜರುಗಿಸಲಾಗುತ್ತಿದೆ ? ಕೇಂದ್ರ ಸರ್ಕಾರದ ತನಿಖಾ ಏಜೆನ್ಸಿಗಳ ಸೂಚನೆ ಹೊರತಾಗಿ ಎಕ್ಸ್ ನಂಥ ಸಾಮಾಜಿಕ ಜಾಲತಾಣದ ಖಾತೆಯನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಯಾರ ಸೂಚನೆ ಮೇರೆಗೆ ಯಾವ ತನಿಖಾ ಏಜೆನ್ಸಿಯು ಎಕ್ಸ್ ನಿರ್ವಹಣೆ ಮಾಡುವವರಿಗೆ ಸೂಚನೆ ನೀಡಿದೆ.
ಇಂಥ ಬೆಳವಣಿಗೆಗಳನ್ನು ಗಮನಿಸಿದಾಗ ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿದರಿರುವ ಬಿಜೆಪಿ ಬೆದರಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಕಾಕ್ರೋಚ್ ಪಾರ್ಟಿಯು ಬಿಜೆಪಿ ವಿರುದ್ಧ ಪ್ರತಿಭಟಿಸಿಲ್ಲ ಅದು ರಾಜಿನಾಮೆಗೆ ಆಗ್ರಹಿಸಿರುವುದು ಸಚಿವ ಧರ್ಮೇಂದ್ರ ಪ್ರಧಾನ್ ಬಗ್ಗೆ ಮಾತ್ರ. ಇಡೀ ಬಿಜೆಪಿ ಸರ್ಕಾರದ ರಾಜಿನಾಮೆಗೆ ಆಗ್ರಹಿಸಿಲ್ಲ ಎಂಬುದು ಗಮನಾರ್ಹ. ಆದರೂ ಬಿಜೆಪಿ ಬೆದರಿರುವುದು ಏಕೆ ?
ಸಾಮಾಜಿಕ ಜಾಲತಾಣಗಳಲ್ಲಿ ಅಕೌಂಟ್ ಹೊಂದಿರುವ ರಾಜಕೀಯ ಪಕ್ಷಗಳಲ್ಲಿ ಬಿಜೆಪಿಯೇ ಅತ್ಯಧಿಕ ಫಾಲೋವರ್ಸ್ ಹೊಂದಿತ್ತು. ಆದರೆ ಕೆಲವೇ ದಿನಗಳಲ್ಲಿ ಸಿಜೆಪಿ ಫಾಲೋವರ್ಸ್ ಸಂಖ್ಯೆ ಅದನ್ನು ಹಿಂದಿಕ್ಕಿತ್ತು. ಈ ದಿಢೀರ್ ಜನಪ್ರಿಯತೆ ಬಿಜೆಪಿಗೆ ಆತಂಕವಾಗಿ ಪರಿಣಮಿಸಿತೇ ?
ಬಿಜೆಪಿಯೇ ಅತ್ಯಧಿಕ ಸಂಖ್ಯೆಯಲ್ಲಿ ಯುವ ಮತದಾರರ ಒಲವು ಗಳಿಸಿತ್ತು. ಈಗ ಸಿಜೆಪಿಗೆ ಯುವ ಜನತೆಯ ಒಲವು – ಬಲವು ಹೆಚ್ಚಾಗುತ್ತಿರುವುದು ಬಿಜೆಪಿ ಆತಂಕಕ್ಕೆ ಕಾರಣವಾಗಿದೆಯೇ ?
ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿದಿರುವ ಪ್ರತಿವರ್ಷ ಗಣನೀಯ ಸಂಖ್ಯೆಯಲ್ಲಿ ಉದ್ಯೋಗಗಳನ್ನು ಸೃಷ್ಟಿಸಿ ನಿರುದ್ಯೋಗ ನಿವಾರಿಸುವುದಾಗಿ ಹೇಳಿತ್ತು. ಆದರೆ ಅದು ಜಾರಿಗೆ ಬಂದಿಲ್ಲ. ನಿರುದ್ಯೋಗಿ ಯುವಜನತೆ ಆಕ್ರೋಶ ತನ್ನತ್ತ ತಿರುಗಬಹುದು ಎಂಬ ಆತಂಕ ಬಿಜೆಪಿಗಿದೆಯೇ
