ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ದುರಂತ ನಡೆದಿದೆ. ೧೧ ಮಂದಿ ದಾರುಣವಾಗಿ ಮೃತರಾಗಿದ್ದಾರೆ. ಅವರ ಆಯುಸ್ಸು ಅಷ್ಟೇ ಇತ್ತು, ಎಲ್ಲ ವಿಧಿಯಾಟ ಎಂದು ಅಯ್ಯೋ ಪಾಪ ಎಂದು ಲೊಚಗುಡುತ್ತಾ ಎಲ್ಲ ಮರೆತು ಸುಮ್ಮನಾಗಬೇಕೆ ? ಈ ದುರಂತಕ್ಕೆ  ಕಾರಣರಾದವರಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಬೇಕೆ ?

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಆಟಗಾರರು ಜೂನ್ ೪, ೨೦೦೫ ರಂದು ಮಧ್ಯಾಹ್ನ ೧.೩೦ ರ ಸುಮಾರಿಗೆ HAL ವಿಮಾನ ನಿಲ್ದಾಣಕ್ಕೆ ಬಂದರು. ಅಲ್ಲಿ ಅವರನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬರಮಾಡಿಕೊಂಡರು. ಇದಾದ ನಂತರ ಆಟಗಾರರು ಸಂಜೆ ೪ ರ  ಸುಮಾರಿಗೆ ಸನ್ಮಾನ ಸಮಾರಂಭಕ್ಕಾಗಿ ವಿಧಾನಸೌಧಕ್ಕೆ ಬಂದರು. ಅಲ್ಲಿ ಸರ್ಕಾರಿ ಕಾರ್ಯಕ್ರಮದ ಬದಲು ಕೌಟುಂಬಿಕ ಕಾರ್ಯಕ್ರಮವೇ ನಡೆಯಿತು.

ಮಂತ್ರಿಗಳು, ಅಧಿಕಾರಿಗಳ ಕುಟುಂಬವರ್ಗದವರು, ಸ್ನೇಹಿತರೇ ತುಂಬಿದ್ದರು. ಸೆಲ್ಫಿ ತೆಗೆದುಕೊಳ್ಳಲು ಮುಗಿ ಬೀಳುತ್ತಿದ್ದರು. ಮಳೆ ಬಾರದೇ ಇದಿದ್ದರೆ ಬಹುಶಃ ಅಲ್ಲಿಯೇ ಅಭಿಮಾನಿಗಳ ತಾಳ್ಮೆಯ ಕಟ್ಟೆ ಹೊಡೆಯುತ್ತಿತ್ತೋ ಏನೋ ? ಆಟಗಾರರು ಚಿನ್ನಸ್ವಾಮಿ ಕ್ರೀಡಾಂಗಣದತ್ತ ತೆರಳಿದರು. ಇಷ್ಟೊತ್ತಿಗಾಗಲೇ ಅಲ್ಲಿ ಸ್ಟೇಡಿಯಂ ಒಳಗೆ ಹೋಗಲು ನೂಕುನುಗ್ಗಲು ಉಂಟಾಗಿತ್ತು.  ಜನಸಂದಣಿಯ ದುರಂತದಲ್ಲಿ ೧೧ ಜನರು ಮೃತಪಟ್ಟರು ಮತ್ತು ೩೩ ಕ್ಕೂ ಹೆಚ್ಚು ಜನರು ಗಾಯಗೊಂಡರು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ಮಾನ ಸಮಾರಂಭವನ್ನು ಆಯೋಜಿಸಿತ್ತು. ಜೊತೆಗೆ ವಿಧಾನ ಸೌಧದಿಂದ ಕ್ರೀಡಾಂಗಣದವರೆಗೆ ಓಪನ್-ಟಾಪ್ ಬಸ್ ಪರೇಡ್‌ನಂತಹ ಹೆಚ್ಚುವರಿ ಕಾರ್ಯಕ್ರಮಗಳನ್ನು ಯೋಜಿಸಲಾಗಿತ್ತು.

ಕ್ರೀಡಾಂಗಣದ ಸುತ್ತಮುತ್ತ ಸುಮಾರು ಅಂದಾಜು ೨ ರಿಂದ ೩ ಲಕ್ಷ ಅಭಿಮಾನಿಗಳು ಒಟ್ಟುಗೂಡಿದ್ದರು. ಕ್ರೀಡಾಂಗಣದ ಒಟ್ಟು ಸಾಮರ್ಥ್ಯವೇ ೩೫, ೦೦೦ !! ವದಂತಿಗಳು, ಪಾಸ್‌ ಗೊಂದಲಗಳ ಕಾರಣದಿಂದ ಜೊತೆಗೆ ಗೇಟ್ ನಂ. 7ರ ಬಳಿ ಉಚಿತ ಟಿಕೆಟ್ ವಿತರಣೆಯ ವದಂತಿಯಿಂದಲೂ ಜನಸಂದಣಿ ಉಂಟಾಯಿತು, ಅಪಾರ ಸಂಖ್ಯೆಯ ಅಭಿಮಾನಿಗಳು ಕಿರಿದಾದ ಮಾರ್ಗಗಳ ಮೂಲಕ ಒಮ್ಮೆಲೆ ಒಳಪ್ರವೇಶಿಸಲು ಯತ್ನಿಸಿದಾಗ  ತೀವ್ರ ಒತ್ತಡ ಉಂಟಾಯಿತು. ಅನೇಕರು ಕೆಳಗೆ ಬಿದ್ದರು. ಗುಂಪು ಇದ್ಯಾವುದನ್ನು ಗಮನಿಸದೇ ಒಳಗೆ ನುಗ್ಗುವುದರಲ್ಲಿಯೇ ತೊಡಗಿತ್ತು. ಈ ವೇಳೆ ಸಾವು-ನೋವು ಸಂಭವಿಸಿದೆ.

ದುರಂತದ ನಂತರ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃತರ ಕುಟುಂಬಗಳಿಗೆ ೧೦ ಲಕ್ಷ ರೂಪಾಯಿ  ಪರಿಹಾರವನ್ನು ಘೋಷಿಸಿದರು. ದುರ್ಘಟನೆ ಬಗ್ಗೆ ೧೫ ದಿನಗಳಲ್ಲಿ ತನಿಖೆ ಮಾಡಲು ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿದರು. ಆದರೆ ಇವೆಲ್ಲದರಿಂದ ದಾರುಣವಾಗಿ ಸತ್ತವರು ಮರಳಿ ಬರುವುದಿಲ್ಲ. ಗಾಯಗೊಂಡವರು ಪವಾಡ ಸದೃಶ್ಯವಾಗಿ ಚೇತರಿಸಿಕೊಂಡು ಮೇಲೇಳುವುದಿಲ್ಲ !

ಮುಖ್ಯವಾದ ದೋಷಗಳೇನು?

೧. ವಿಧಾನಸೌಧ ಮತ್ತು ಚಿನ್ನಸ್ವಾಮಿ ಸ್ಟೇಡಿಯಂ ಎರಡು ಕಡೆಯೂ ಸಮಾರಂಭ ಮಾಡುವ ಅವಶ್ಯಕತೆ ಏನಿತ್ತು ?

೨. ಎರಡೂ ಕಡೆ ಸಮಾರಂಭ ಆಯೋಜನೆ ಮಾಡಿದ್ದರಿಂದ ಪೊಲೀಸ್‌ ಬಲ ಹಂಚಿಕೆಯಾಗಿತ್ತು. ಅತೀಗಣ್ಯರು ಇದ್ದ ಕಾರಣ ವಿಧಾನಸೌಧದ ಬಳಿಯೇ ಹೆಚ್ಚು ಗಮನ ನೀಡಲಾಗಿತ್ತು.

೩. ಕೇವಲ ೩೫ ಸಾವಿರ ವೀಕ್ಷಕರಷ್ಟೇ ಕೂರುವ ಸ್ಥಳವಕಾಶ ಇರುವ ಕಡೆ ಸಮಾರಂಭ ಮಾಡಿದ್ದು ಸಹ ದುರಂತಕ್ಕೆ ಕಾರಣ

೪. ಮೆರವಣಿಗೆ, ಪಾಸುಗಳ ಬಗ್ಗೆ ಗೊಂದಲ, ಕೊನೆ ಗಳಿಗೆಯಲ್ಲಿ ಮೆರವಣಿಗೆ ರದ್ದಾಯಿತು.

೫. ಅಭಿಮಾನಿಗಳು ಹೆಚ್ಚು ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದ್ದರೂ ಅದನ್ನು ಕಡೆಗಾಣಿಸಿದ್ದು ! ೨ ರಿಂದ ೩ ಲಕ್ಷ ಅಭಿಮಾನಿಗಳು ಸೇರಿದ್ದರು, ಅಷ್ಟು ದೊಡ್ಡ ಸಂದಣಿಯನ್ನು ನಿಯಂತ್ರಿಸುವ ವ್ಯವಸ್ಥೆಯೇ ಅಲ್ಲಿರಲಿಲ್ಲ.

೬. ಬೆಂಗಳೂರು ಪೊಲೀಸರು ಯಾವುದೇ ಪರೇಡ್‌ಗೆ ಅನುಮತಿ ಇಲ್ಲ ಎಂದು ಹೇಳಿದ್ದರೆ, ಆರ್‌ಸಿಬಿ ಆಯೋಜಕರು ಸಂಜೆ ೫ ಗಂಟೆಯಿಂದ ಪರೇಡ್ ಆರಂಭವಾಗುವುದು ಎಂದು ಘೋಷಿಸಿತು, ಇದು ಅಭಿಮಾನಿಗಳ ಗೊಂದಲಕ್ಕೆ ಮತ್ತು ಕ್ರೀಡಾಂಗಣದ ಕಡೆಗೆ ಒತ್ತಡಕ್ಕೆ ಕಾರಣವಾಯಿತು.

೭. ಉಚಿತ ಟಿಕೆಟ್‌ಗಳ ವದಂತಿಗಳು: ಗೇಟ್ ನಂ. ೭ರಲ್ಲಿ ಉಚಿತ ಟಿಕೆಟ್‌ಗಳನ್ನು ವಿತರಿಸಲಾಗುತ್ತಿದೆ ಎಂಬ ವದಂತಿಯು ಉನ್ಮಾದ ಸೃಷ್ಟಿಸಿತು. ಇದರಿಂದ ಅಭಿಮಾನಿಗಳು ಕಿರಿದಾದ ಪ್ರವೇಶದ್ವಾರದ ಮುಂದೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದರು. ಇದೇ  “ಮರಣದ ಗೂಡು” ಆಗಿ ಮಾರ್ಪಟ್ಟಿತು.

೮. ಸಂದಣಿಯ ಒತ್ತಡ ಹೆಚ್ಚಾದಾಗ ಪೊಲೀಸರು ಸೌಮ್ಯವಾದ ಲಾಠಿ ಚಾರ್ಜ್‌ಗೆ ಮೊರೆ ಹೋದರು, ಇದು ಅಭಿಮಾನಿಗಳಲ್ಲಿ ಮತ್ತಷ್ಟು ಗೊದಲ – ಭಯ ಉಂಟು ಮಾಡಿರಬಹುದು.

೯. ಮಾಹಿತಿಗಳ ಪ್ರಕಾರ ಪೊಲೀಸ್‌ ಹಿರಿಯ ಅಧಿಕಾರಿಗಳು ವಿಜಯೋತ್ಸವ ಸಮಾರಂಭವನ್ನು ಕನಿಷ್ಟ ಭಾನುವಾರದ ಅಂದರೆ ಜೂನ್‌ ೮ರ ತನಕ ಮುಂದೂಡಲು ಸಲಹೆ ಮಾಡಿದ್ದರು. ಆದರೆ ಇವರ ಸಲಹೆಯನ್ನು ಅಧಿಕಾರಸ್ಥ ರಾಜಕಾRಣಿಗಳು ಲೆಕ್ಕಿಸಿಲ್ಲ ಎನ್ನಲಾಗಿದೆ.

೧೦. ಸ್ಟೇಡಿಯಂ ಬಳಿ ಪ್ರಥಮ ಚಿಕಿತ್ಸೆ ವ್ಯವಸ್ಥೆ, ಅಂಬುಲೆನ್ಸೆಗಳು, ವೈದ್ಯರು ಇರಲಿಲ್ಲ.

೧೧. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮತ್ತು ಆರ್‌ಸಿಬಿ ಆಡಳಿತ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಣೆಗೆ ಅನುತಿ ಕೇಳಿದೆ. ಪೊಲೀಸರು ಸದ್ಯಕ್ಕೆ ಬೇಡ ಎಂದರೂ ಅವರ ಮೇಲೆ ಒತ್ತಡ ಹೇರಿದ ಅಧಿಕಾರಸ್ಥ ರಾಜಕಾರಣಿ ಯಾರು ?

೧೨. ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಎಷ್ಟು ಜನ ಸೇರಬಹುದು ಎಂಬ ಮಾಹಿತಿ ಇರುತ್ತದೆ. ಅದನ್ನು ಅವರು ಗೃಹಮಂತ್ರಿ ಜೊತೆ ಹಂಚಿಕೊಂಡಿರುತ್ತಾರೆ. ಆದರೂ ಗೃಹಮಂತ್ರಿ ಸಮಾರಂಭಕ್ಕೆ ಅನುಮತಿಸಿದ್ದು ಹೇಗೆ ? ಇವರ ಮೇಲೆ ಒತ್ತಡ ಹೇರಿದ ಅಧಿಕಾರಸ್ಥ ರಾಜಕಾರಣಿ ಯಾರು ?

೧೩ ಈ ದುರಂತಕ್ಕೆ ಮೊದಲ ಹೊಣೆಗಾರರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮತ್ತು ಆರ್‌ಸಿಬಿ ಆಡಳಿತ. ಇವರ ಮೇಲೆ ಏಕೆ ಪೊಲೀಸರು ಎಫ್‌ ಐ ಆರ್‌ ದಾಖಲಿಸಿಲ್ಲ ? ಬದಲಿಗೆ ೧೧ ಅಸ್ವಾಭಾವಿಕ ಸಾವಿನ ವರದಿಗಳನ್ನು (ಯುಡಿಆರ್‌ಗಳು) ಏಕೆ ದಾಖಲಿಸಲಾಗಿದೆ ?

೧೪. ಒಟ್ಟಾರೆ ಘಟನಾವಳಿ ಗಮನಿಸಿದಾಗ ಇದರಲ್ಲಿ ಪೊಲೀಸರು ಯಾವುದೇ ತಪ್ಪು ಮಾಡಿಲ್ಲದಿರುವುದು ತಿಳಿಯುತ್ತದೆ. ಇವರ ಮೇಲೆ ಅನವಶ್ಯಕವಾಗಿ ಒತ್ತಡ ಹಾಕಲಾಗಿದೆ.  ಇದೇ ದುರಂತಕ್ಕೆ ಕಾರಣ

೧೫. ಇನ್ನು ಅಭಿಮಾನಿಗಳನ್ನು ದೂಷಿಸುವುದು ಸರಿಯಲ್ಲ. ವಂದಂತಿಗಳು, ಗೊಂದಲಗಳ ಕಾರಣದಿಂದ ಗೇಟ್‌ ನಂಬರ್‌ ೭ ನೂಕುನುಗ್ಗಲು ಉಂಟಾಗಿದೆ.

ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ಸಾಧ್ಯತೆಯ  ಸಮಾರಂಭವನ್ನು ತೆರೆದ ಬಯಲಿನಲ್ಲಿ, ವಿಶಾಲವಾದ ಮತ್ತು ಎತ್ತರದ ವೇದಿಕೆ ನಿರ್ಮಿಸಿ ಆಯೋಜಿಸುವುದು ಸೂಕ್ತ. ಇದು ಪ್ರಾಥಮಿಕ ತಿಳಿವಳಿಕೆ. ಇದರ ಅರಿವು ರಾಜ್ಯ ಸರ್ಕಾರ, ಕೆಎಸ್‌ಸಿಎ, ಆರ್‌ಸಿಬಿ ಆಡಳಿತಕ್ಕೆ ಇರಲಿಲ್ಲವೇ ? ದುರಂತ ನಡೆದು ಹೋಗಿದೆ. ಸಬೂಬುಗಳನ್ನು ಹೇಳಿಕೊಂಡು ಮುಂದೆ ಹೋಗುವುದು ಥರವಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.

Similar Posts

Leave a Reply

Your email address will not be published. Required fields are marked *