ಜೀವವಿಜ್ಞಾನಿ ಫ್ರಾನ್ಸ್ ಡಿ ವಾಲ್ ಅವರು ರಚಿಸಿದ ಬಹುವರ್ಷಗಳ ಅಧ್ಯಯನ ಕೃತಿ “Chimpanzee Politics” ಮಾನವ ವಿಜ್ಞಾನಿಗಳು, ರಾಜಕೀಯ ಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು ಮತ್ತು ಇಂಗ್ಲಿಷ್ ಓದುಗರನ್ನು ಸೂಜಿಗಲ್ಲಿನಂತೆ ಸೆಳೆದಿದೆ. ಇದನ್ನು ಖ್ಯಾತ ಲೇಖಕ ಡಾ. ಪ್ರದೀಪ್ ಕೆಂಜಿಗೆ ಮೂಲ ಆಧಾರವಾಗಿಟ್ಟುಕೊಂಡು “ನರ ವಾನರ” ಕೃತಿ ರಚಿಸಿದ್ದಾರೆ. ಇಲ್ಲಿ ಇವರು ಇದೊಂದೇ ಕೃತಿಯನ್ನು ಆಧರಿಸಿಲ್ಲ. ಚಿಂಪಾಂಜಿಗಳ ಬಗ್ಗೆ ಅಧ್ಯಯನ ಮಾಡಿರುವ ಬೇರೆಬೇರೆ ಜೀವಶಾಸ್ತ್ರಜ್ಞರ ಕೃತಿಗಳನ್ನು ಆಳವಾಗಿ ಕೆಲವಾರು ವರ್ಷ ಕಾಲ ಅಧ್ಯಯನ ಮಾಡಿದ್ದಾರೆ. ಪೂರಕವಾದ ಟಿಪ್ಪಣಿಗಳನ್ನು ಸಂಗ್ರಹಿಸಿದ್ದಾರೆ. ಇದರ ಫಲಶೃತಿಯಾಗಿ “ನರ ವಾನರ” ಅಮೂಲ್ಯ ಕೃತಿಯಾಗಿ ಹೊರ ಹೊಮ್ಮಿದೆ.
“ರಾಜಕೀಯ” ಇದು ಮನುಷ್ಯರಲ್ಲಿ ತಂತಾನೆ ಅಳವಡಿಕೆಯಾದ ಗುಣ ! ಕುಟುಂಬದಲ್ಲಿ, ಸ್ನೇಹವಲಯದಲ್ಲಿ, ಸಂಸ್ಥೆಗಳಲ್ಲಿ, ಸರ್ಕಾರ ರಚನೆಯಲ್ಲಿ ನಂತರ ಸರ್ಕಾರದಲ್ಲಿ, ವಿರೋಧ ಪಕ್ಷಗಳಲ್ಲಿ ನಡೆಯುತ್ತಲೇ ಇರುತ್ತದೆ. ನಾಯಕರಾಗಿ, ಆಡಳಿತ ವ್ಯವಸ್ಥೆಯ ಚುಕ್ಕಾಣಿ ಹಿಡಿಯುವುದಕ್ಕಾಗಿ ನಿರಂತರ ರಾಜಕೀಯ ನಡೆಯುತ್ತಿರುತ್ತದೆ. ಹಲವೊಮ್ಮೆ ಇಂಥ ಪ್ರಯತ್ನಗಳು ದಿಗ್ಬ್ರಮೆ ಮೂಡಿಸುವ ರೀತಿ ಇರುತ್ತದೆ.
ಈ ರೀತಿಯ ರಾಜಕೀಯ ಮಾಡುವ ಪ್ರವೃತ್ತಿ ಎಲ್ಲಿಂದ ಬಂತು ? ಚಿಂಪಾಂಜಿಗಳನ್ನು ಮಾನವರ ಪೂರ್ವಜರು ಎಂದೇ ಭಾವಿಸಲಾಗಿದೆ. ಅವುಗಳ ವರ್ತನೆ ಬಗ್ಗೆ ವಿದ್ವತ್ ಪೂರ್ಣ ಮಾಹಿತಿ ನೀಡಿರುವ ಜೀವವಿಜ್ಞಾನಿ ಫ್ರಾನ್ಸ್ ಡಿ ವಾಲ್ ಅವರು ಇಂಥ ಬೇಸಿಕ್ ಇನ್ಸ್ಟಿಕ್ಟ್ (Basic Instinct) ಚಿಂಪಾಜಿಗಳಿಂದ ಬಂದಿರಬಹುದೇ ಎಂಬ ಪರಿಕಲ್ಪನೆ ಮುಂದಿಡುತ್ತಾರೆ. ಆದರೆ ಇದೇ ಅಂತಿಮ ಸತ್ಯ ಎಂದು ಅವರು ವಾದಿಸುವುದಿಲ್ಲ.
ಚಿಂಪಾಂಜಿಗಳ ಅಚ್ಚರಿಯ, ದಿಗ್ಬ್ರಮೆಯ ಮತ್ತು ಆಘಾತಕಾರಿಯಾದ ಕುಟಿಲ ರಾಜಕೀಯ ಓದಿ ಹೀಗೂ ಉಂಟೆ ಎನಿಸುತ್ತದೆ. ಈಗಾಗಲೇ ಜೀವವಿಜ್ಞಾನಿಗಳನೇಕರು ಚಿಂಪಾಂಜಿಗಳ ವರ್ತನೆಗಳ ಕುರಿತು ಅಧ್ಯಯನ ಮಾಡಿದ್ದಾರೆ. ಅಚ್ಚರಿ ಎನಿಸುವ ಅಂಶಗಳನ್ನು ತಿಳಿಸಿದ್ದಾರೆ. ಇಂಥ ವಿಚಾರಗಳನ್ನು ತಿಳಿಸಿದವರಲ್ಲಿ ಜೇನ್ ಗುಡಾಲ್, ಟೋಷಿಸಾಡ ನಿಷಿಡಾ, ಡಿಯಾನ್ ಫಾಸ್ಸೆ ಪ್ರಮುಖರು.
ಮುಖ್ಯವಾಗಿ “ನರ ವಾನರ” ಕೃತಿಯ ಸಂದರ್ಭದಲ್ಲಿ ಪ್ರದೀಪ್ ಕೆಂಜಿಗೆ ಅವರು ಚಿಂಪಾಂಜಿಗಳನ್ನು ಅಧ್ಯಯನ ಮಾಡಿರುವವರು ನೀಡಿದ ಮಾಹಿತಿಗಳು ಜೊತೆಗೆ ಜೀವ ವಿಕಾಸವಾದಕ್ಕೆ ಸಂಬಂಧಿಸಿದಂತೆ ಅಧ್ಯಯನ ಮಾಡಿದ ಇ.ಒ ವಿಲ್ಸನ್, ರಿಚರ್ಡ್ ಡಾಕಿನ್ಸ್ ಮತ್ತು ಯುವಾಲ್ ಹರಾರಿ ಅವರ ಕೃತಿಗಳನ್ನು ಅಧ್ಯಯನ ಮಾಡಿದ್ದಾರೆ. ಸ್ವತಃ ನೂರಾರು ಪುಟಗಟ್ಟಲೇ ಟಿಪ್ಪಣಿಗಳನ್ನು ಮಾಡಿದ್ದಾರೆ. ಇವೆಲ್ಲವುಗಳನ್ನು ಹೆಣೆದು ಕೇವಲ ನೂರ ಹತ್ತು ಪುಟಗಳಿರುವ ಕೃತಿಯನ್ನು ಕಟ್ಟಿಕೊಡುವುದೆಂದರೆ ಸಾಮಾನ್ಯ ಸಂಗತಿಯಲ್ಲ. ಕನ್ನಡ ಸಾಹಿತ್ಯ ಸಂದರ್ಭದಲ್ಲಿಯೇ ಇದೊಂದು ಅಪರೂಪ ಹಾಗೂ ಅಪೂರ್ವ ಕೃತಿ !
ಸಾಮಾನ್ಯ ಓದುಗರಿಗೆ ವಿಜ್ಞಾನ ವಿಷಯಗಳನ್ನು ಹಾಗೆಹಾಗೆ ಹೇಳಿದರೆ ಸರಾಗವಾಗಿ ಓದಿಸಿಕೊಂಡು ಹೋಗುವುದು ಕಷ್ಟ ! ಇದನ್ನು ಪ್ರದೀಪ್ ಕೆಂಜಿಗೆ ಗಮನದಲ್ಲಿಟ್ಟುಕೊಂಡಿರುವುದು ಪುಸ್ತಕ ಓದಿದಾಗ ತಿಳಿಯುತ್ತದೆ. ಕೃತಿಯ ಆರಂಭದಲ್ಲಿಯೇ ಫ್ರಾನ್ಸ್ ಡಿ ವಾಲ್ ಹೇಳಿರುವ ಮಾತುಗಳನ್ನು ಉಲ್ಲೇಖಿಸಿದ್ದಾರೆ. “ಕುತೂಹಲ ಕೆರಳಿಸುವ, ಜನಪ್ರಿಯ ಮಾದರಿಯ ಪುಸ್ತಕಗಳನ್ನು ಬರೆಯುವುದೆಂದರೆ ನನಗೆ ಬಹಳ ಖುಷಿ. ಅದರಲ್ಲೂ ವೈಜ್ಞಾನಿಕ ಸತ್ಯಗಳನ್ನು ಆಕರ್ಷಕವಾಗಿ ಹೇಳುವುದು ತುಂಬ ಇಷ್ಟ. ಆದರೆ ಅದು ಎಷ್ಟೊಂದು ಕಷ್ಟದ ಕೆಲಸ ಎಂಬುದು ಲೇಖಕರಿಗೆ ಮಾತ್ರ ಗೊತ್ತು” ಅಚ್ಚರಿ ಎಂದರೆ ಸ್ವತಃ ಫ್ರಾನ್ಸ್ ಡಿ ವಾಲ್ ಅವರಿಗೆ ಇದರಲ್ಲಿ ಯಶಸ್ವಿಯಾಗುವುದು ಸಂಪೂರ್ಣ ಸಾಧ್ಯವಾಗಿಲ್ಲ. ಆದರೆ ಪ್ರದೀಪ್ ಕೆಂಜಿಗೆ ಅವರು ಕನ್ನಡದ ಸಂದರ್ಭದಲ್ಲಿ ಇದರಲ್ಲಿ ಸಂಪೂರ್ಣ ಯಶಸ್ವಿಯಾಗಿರುವುದು ಅವರು ಪಟ್ಟಿರುವ ಪರಿಶ್ರಮಕ್ಕೆ ಕನ್ನಡಿ ಹಿಡಿಯುತ್ತದೆ.
ಕೃತಿಯಲ್ಲಿ ಚಿಂಪಾಂಜಿಗಳ ಅನೇಕ ಜೀವಂತ ಪಾತ್ರಗಳು ಬರುತ್ತದೆ. ಜೀವವಿಜ್ಞಾನಿಗಳು ಪ್ರತಿಯೊಂದು ಚಿಂಪಾಂಜಿಗೂ ಪ್ರತ್ಯೇಕ ಹೆಸರುಗಳನ್ನು ನಾಮಕರಣ ಮಾಡಿದ್ದಾರೆ. ಏರಾನ್, ಲೂಯಿಟ್, ನಿಕ್ಕಿ, ಫ್ಯೂಯಟ್ ಎಂಬ ವೈಯಾರಿ, ಬಿಗ್ ಮಾಮ ಎಂಬ ಹೆಗ್ಗಡತಿ, ಡ್ಯಾಂಡಿ, ಗೊರಿಲ್ಲಾ ಹೀಗೆ ಹಲವಾರು ಪಾತ್ರಗಳು ಬರುತ್ತವೆ. ಮನುಷ್ಯರಂತೆಯೇ ಭಾವನೆಗಳು (ಬಹುಶಃ ಚಿಂಪಾಂಜಿಗಳಂತೆ ಮನುಷ್ಯರ ಭಾವನೆಗಳು ಎನ್ನಬೇಕೆನೋ ?)
ಇವುಗಳಲ್ಲಿಯೇ ಗುಂಪಿನ ನಾಯಕತ್ವಕ್ಕಾಗಿ ನಡೆಯುವ ಹುನ್ನಾರ, ಕುಟಿಲ ರಾಜಕೀಯ ನೀತಿಗಳು, ಹೆಣ್ಣು ಚಿಂಪಾಂಜಿಗಳ ಬೆಂಬಲಪೂರ್ವಕ ವರ್ತನೆ, ದಾಯಾದಿ ಕಲಹಗಳು, ಬೇರೆಬೇರೆ ಗುಂಪುಗಳ ನಡುವೆ ನಡೆಯುವ ಯದ್ದಗಳು, ಚಿಂಪಾಂಜಿಗಳು ಅನುಸರಿಸುವ ಗೆರಿಲ್ಲಾ ಯುದ್ದ ಮಾದರಿಗಳ ಬಗ್ಗೆ “ನರ ವಾನರ” ಕೃತಿ ಹೇಳುತ್ತದೆ.
“ನರ ವಾನರ” ಕೃತಿಯಲ್ಲಿ ಒಂದು ಕೊಲೆಯ ಸುತ್ತ, ವಾಟರ್ ಗೇಟ್ (ಅಮೆರಿಕಾ ರಾಜಕೀಯದ ಬಹುದೊಡ್ಡ ಹಗರಣ), ಗೋಂಬೆ ಎಂಬ ಗೊಂಡಾರಣ್ಯದಲ್ಲಿ, ಪಾತ್ರವರ್ಗದ ಪರಿಚಯ, ಗದ್ದುಗೆಗಾಗಿ ಗುದ್ದಾಟ, ಶಾಂತಪರ್ವ, ಉರುಳಿದ ದಾಳ, ಚಾಣಕ್ಯ ತಂತ್ರ, ತುಘಲಕ್ ದರ್ಬಾರ್, ಕಾಂತಾರ ಕುರುಕ್ಷೇತ್ರ, ವಾನರಸ್ವಾಮಿ, ಕಾಮನ ಕುಣಿತ, ಎಂದೂ ಮುಗಿಯದ ಕಥೆ ಹೀಗೆ ೧೩ ಅಧ್ಯಾಯಗಳು ಬರುತ್ತವೆ. ಅಧ್ಯಾಯದಿಂದ ಮತ್ತೊಂದು ಅಧ್ಯಾಯಕ್ಕೆ ಓದು ಸಾಗುವಾಗ ಕುತೂಹಲ ಹೆಚ್ಚಾಗುತ್ತಾ ಹೋಗುತ್ತದೆ. ರಾತ್ರಿ ಸುಮಾರು ೧೦.೩೦ಕ್ಕೆ ಕೃತಿ ಹಿಡಿದ ನಾನು ೧.೩೦ಕ್ಕೆ ಅಂದರೆ ಮೂರು ತಾಸುಗಳಲ್ಲಿ ಸಂಪೂರ್ಣ ಓದಿದೆ. ಅಂದರೆ ಕೃತಿ ಎಷ್ಟು ಕುತೂಹಲ ಮೂಡಿಸಿರಬಹುದು ?
ಕೃತಿಯನ್ನು ಓದುವಾಗ ಅರೇ ಚಿಂಪಾಂಜಿಗಳಂತೆ ರಾಜಕಾರಣಿಗಳು ವರ್ತಿಸುತ್ತಾರಲ್ಲ ಎನಿಸುತ್ತದೆ. ನಿಮ್ಮ ಲಹರಿಯಲ್ಲಿ ಬೇರೆಬೇರೆ ರಾಜಕಾರಣಿಗಳ ಚಿತ್ರ ಮೂಡಬಹುದು ! ಕೃತಿಯಲ್ಲಿ ಅಮೆರಿಕಾದ ಕುಪ್ರಸಿದ್ದ ಹಗರಣ “ವಾಟರ್ ಗೇಟ್” ಮತ್ತು ಅದರ ರೂವಾರಿ ಅಮೆರಿಕಾದ ಅಧ್ಯಕ್ಷ ನಿಕ್ಸನ್ ಪ್ರಸ್ತಾಪವಾಗುತ್ತದೆ. ಏಕೆ ಏನು ಎನ್ನುವುದು ಪುಸ್ತಕ ಓದಿದಾಗ ತಿಳಿಯುತ್ತದೆ.
“ನರ ವಾನರ” ಕೃತಿಯನ್ನು ಮೈಸೂರಿನ ಪುಸ್ತಕ ಪ್ರಕಾಶನ ಪ್ರಕಟಿಸಿದೆ. ಗುಣಮಟ್ಟದ ಕಾಗದ ಬಳಸಲಾಗಿದೆ. ಒಟ್ಟು ನೂರ ಹತ್ತು ಪುಟಗಳಿರುವ ಪುಸ್ತಕದ ಬೆಲೆ ೧೮೦ ರೂ. ಆನ್ ಲೈನ್ ನಲ್ಲಿಯೂ ಪುಸ್ತಕ ತರಿಸಿಕೊಳ್ಳಬಹುದು. ಆನ್ ಲೈನ್ ನಲ್ಲಿ ತರಿಸಿಕೊಳ್ಳಲು ಇಚ್ಚಿಸುವವರು https://beetlebookshop.com/ ಮುಖಾಂತರ ತರಿಸಿಕೊಳ್ಳಬಹುದು. ಬೆಂಗಳೂರಿನ ವಿಜಯನಗರದ ಮೆಟ್ರೋ ಸ್ಟೇಷನ್ ಪಕ್ಕ ಇದರ ಮಳಿಗೆಯಿದೆ. ಅಲ್ಲಿಗೂ ಭೇಟಿ ನೀಡಬಹುದು. ದೂರವಾಣಿ ಸಂಖ್ಯೆ: 9742225779
ಕುಮಾರ್
ಮೊನ್ನೆ ಅಷ್ಟೇ ನೀವು ನನಗೆ ಸಿಕ್ಕಿ,ದಾಗ, ನನ್ನ ಈ ಪುಸ್ತಕ ದ ಬಗ್ಗೆ ಹೇಳಿದೆ:
ಕೂಡಲೇ ತರಿಸಿಕೊಂಡು, ವಿಷದವಾಗಿ ಓದಿ, ಇಷ್ಟೊಂದು , ಆಕರ್ಷಕ ಮತ್ತು ಪೂರ್ಣ ಲೇಖನ ಬರೇದೇಬಿಟ್ಟಿದ್ದೀರಲ್ಲಾ?
ವಂದನೆ ಗಳು.
ಪ್ರದೀಪ್ ಕೆಂಜಿಗೆ
ಕನ್ನಡದ ಓದುಗರಿಗೆ ಬಹು ಕುತೂಹಲಕಾರಿಯಾದ ಕೃತಿಯನ್ನು ನೀಡಿದ್ದೀರಿ. ಧನ್ಯವಾದ. ಚಿಂಪಾಂಜಿಗಳು ಹೀಗೆಲ್ಲ ವರ್ತಿಸಬಹುದೇ ಎಂದು ಅಚ್ಚರಿಯಾಗುತ್ತದೆ. ಆದರೆ ಅಧ್ಯಯನಗಳು ಇಂಥ ಅಚ್ಚರಿಗಳನ್ನು ಹೊರ ಜಗತ್ತಿಗೆ ತಿಳಿಸುತ್ತವೆ.